ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಕೆ.ಆರ್.ಪುರ ಠಾಣೆ ಮುಖ್ಯರಸ್ತೆಯಲ್ಲಿ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 20:01 IST
Last Updated 12 ಮಾರ್ಚ್ 2017, 20:01 IST
ಕೆ.ಆರ್.ಪುರ ಠಾಣೆ ಮುಖ್ಯ ರಸ್ತೆ ಬದಿಯಲ್ಲಿ ಭಾನುವಾರ ಕಂಡು ಬಂದ ಕಸದ ರಾಶಿ
ಕೆ.ಆರ್.ಪುರ ಠಾಣೆ ಮುಖ್ಯ ರಸ್ತೆ ಬದಿಯಲ್ಲಿ ಭಾನುವಾರ ಕಂಡು ಬಂದ ಕಸದ ರಾಶಿ   

ಬೆಂಗಳೂರು: ಕೆ.ಆರ್.ಪುರ ಪೋಲಿಸ್ ಠಾಣೆ ಮುಖ್ಯರಸ್ತೆಯಲ್ಲಿ ಕಳೆದ ಒಂದು ವಾರದಿಂದ ಕಸದ ರಾಶಿ ಹಾಗೆಯೇ ಬಿದ್ದಿದ್ದು, ಮಾಹಿತಿ ನೀಡಿದರೂ ಕಸ ವಿಲೇವಾರಿಗೆ ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ.

ಕಾಶಿವಿಶ್ವನಾಥಪುರ ಬಡಾವಣೆ ಹಾಗೂ ಐಟಿಐ ಬಡಾವಣೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನವು ಸಾವಿರಾರು ಮಂದಿ ಸಂಚರಿಸುತ್ತಾರೆ. ಆದರೆ, ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದಿದ್ದು, ಗಬ್ಬುನಾರುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ಮತ್ತು ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಸ್ಥಳೀಯ ನಿವಾಸಿ ನಯಾಜ್‌ಖಾನ್, ‘ಕೊಳೆತ ದ್ರಮರೂಪದ ತ್ಯಾಜ್ಯವು ರಸ್ತೆ ಮೇಲೆ ಹರಿಯುತ್ತಿದ್ದು, ನೊಣಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗವು ಹರಡುವ ಭೀತಿ ಎದುರಾಗಿದೆ’ ಎಂದು ದೂರಿದರು.

‘ಸಂಗ್ರಹವಾಗುವ ಕಸವನ್ನು ಬಿಬಿಎಂಪಿ ಪೌರಕಾರ್ಮಿಕರು ನಿತ್ಯ ವಿಲೇವಾರಿ ಮಾಡುವುದಿಲ್ಲ. ಕೆಲವೊಮ್ಮೆ ಕಸಕ್ಕೆ ಬೆಂಕಿ ಇಡುತ್ತಾರೆ. ಕಸ ಸಂಗ್ರಹವಾಗಿರುವ ಸ್ಥಳದ ಸಮೀಪದಲ್ಲಿ ಬಿಬಿಎಂಪಿ ಕಚೇರಿ ಇದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಿವಾಸಿ ಆದಿತ್ಯ ಮಾತನಾಡಿ, ‘ಈ ಭಾಗದಲ್ಲಿ ತಿಂಗಳಿಗೆ ಒಂದೆರಡು ಬಾರಿ ಮಾತ್ರ ಕಸವನ್ನು ವಿಲೇವಾರಿ ಮಾಡಲಾಗುತ್ತದೆ. ಸ್ಥಳೀಯ ಪಾಲಿಕೆ ಸದಸ್ಯೆ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಗಮನಕ್ಕೂ ತಂದರೂ ಅವರು ಇತ್ತ ಗಮನ ಹರಿಸುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.