ಬೆಂಗಳೂರು: ಕೆ.ಆರ್.ಪುರದ ಐಟಿಐ ಗೇಟ್ ಬಳಿಯ ರಸ್ತೆ ಪಕ್ಕದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 14 ಅಂಗಡಿಗಳನ್ನು ಬಿಎಂಟಿಎಫ್ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.
ಬಿಬಿಎಂಪಿ ಸದಸ್ಯರು ಹಾಗೂ ಶಾಸಕರ ಬೆಂಬಲಿಗರೆಂದು ಹೇಳಿಕೊಂಡು ಕೆಲವರು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಇದಕ್ಕೆ ಬಿಬಿಎಂಪಿಯಿಂದ ಪರವಾನಗಿ ಪಡೆದಿರಲಿಲ್ಲ.
ಈ ಬಗ್ಗೆ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಅವರು ಬಿಎಂಟಿಎಫ್ಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಬಿಎಂಟಿಎಫ್ ಅಧಿಕಾರಿಗಳು ಕೆಲ ತಿಂಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದರು.
ರಸ್ತೆಯ ಪಕ್ಕದ ಸರ್ಕಾರಿ ಜಾಗದಲ್ಲಿ ಹಾಗೂ ಪಾದಚಾರಿಗಳ ಮಾರ್ಗದಲ್ಲಿ ಅಂಗಡಿಗಳನ್ನು ನಿರ್ಮಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಹೀಗಾಗಿ ಅಂಗಡಿಗಳನ್ನು ಖಾಲಿ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಿದ್ದರು. ಆದರೂ ಅಂಗಡಿಗಳನ್ನು ಖಾಲಿ ಮಾಡಿರಲಿಲ್ಲ.
‘ಪಾದಚಾರಿ ಮಾರ್ಗದಲ್ಲಿ ಅಂಗಡಿಗಳನ್ನು ನಿರ್ಮಿಸಿರುವ ಬಗ್ಗೆ ಬಿಬಿಎಂಪಿ ಕೌನ್ಸಿಲ್ನಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ, ಮೇಯರ್ ಸ್ಪಂದಿಸಿರಲಿಲ್ಲ. ಅಲ್ಲದೆ, ನಮ್ಮ ಹೋರಾಟಕ್ಕೆ ಸ್ಥಳೀಯ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎನ್.ಆರ್.ರಮೇಶ್ ಅವರೊಂದಿಗೆ ತೆರಳಿ ಬಿಎಂಟಿಎಫ್ಗೆ ದೂರು ನೀಡಿದ್ದೆವು’ ಎಂದು ಪೂರ್ಣಿಮಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.