ಬೆಂಗಳೂರು: ಕನ್ನಡಪರ ಹೋರಾಟಗಾರ ಮ.ರಾಮಮೂರ್ತಿ ಜನ್ಮಶತಮಾನೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದಲ್ಲಿ ಗುರುವಾರ ಆಚರಿಸಲಾಯಿತು.
ಕಮಲಮ್ಮ ಮ.ರಾಮಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅವರಿಗೆ ಪರಿಷತ್ತು ವತಿಯಿಂದ ₹51,000 ನೀಡಲಾಯಿತು.
‘ಮ.ರಾಮಮೂರ್ತಿ ದತ್ತಿ ಪ್ರಶಸ್ತಿ’ಯನ್ನು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಸಂಶೋಧಕ ಎಂ.ಚಿದಾನಂದಮೂರ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹25,000 ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಪ್ರಶಸ್ತಿ ಮೊತ್ತವನ್ನು ಚಂದರಗಿ ಅವರು ಪರಿಷತ್ತಿಗೆ ಮರಳಿಸಿದರು. ಅದರಲ್ಲಿ ₹10 ಸಾವಿರವನ್ನು ಕಮಲಮ್ಮ ಅವರಿಗೆ ನೀಡಲಾಯಿತು. ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಲಾ ₹5,000 ನೀಡುವಂತೆ ಚಂದರಗಿ ತಿಳಿಸಿದರು.
ಮ.ರಾಮಮೂರ್ತಿ ಕುರಿತಾಗಿ ‘ಕನ್ನಡ ವೀರ ಸೇನಾನಿ’ ಎಂಬ ಕೃತಿಯನ್ನು ಲೇಖಕ ರಾ.ನಂ.ಚಂದ್ರಶೇಖರ ಹೊರತಂದಿದ್ದಾರೆ. ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಬಿಡುಗಡೆಗೊಳಿಸಿದರು. 96 ಪುಟಗಳುಳ್ಳ ಆ ಕೃತಿಯ ಬೆಲೆ ₹60.
ಎಂ.ಚಿದಾನಂದಮೂರ್ತಿ, ‘ಬೆಳಗಾವಿಯು ರಾಜ್ಯದ ರಾಜಧಾನಿ ಆಗಬೇಕಿತ್ತು. ಅದಕ್ಕೆ ಬೇಕಾದ ಎಲ್ಲ ಅರ್ಹತೆಗಳು ಆ ಜಿಲ್ಲೆಗೆ ಇದೆ. ಆದರೆ, ಅದನ್ನು ರಾಜ್ಯದಲ್ಲಿಯೇ ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ’ ಎಂದರು.
* ಇಂದು ಕನ್ನಡಪರ ಹೋರಾಟಗಳು ಬೂಟಾಟಿಕೆಯ ವೇಷ ತೊಟ್ಟಿವೆ. ಕತ್ತೆ ಹಾಗೂ ಕುದುರೆ ಮೆರವಣಿಗೆಗೆ ಸೀಮಿತಗೊಂಡಿವೆ.
–ಎಂ. ಚಿದಾನಂದಮೂರ್ತಿ, ಸಂಶೋಧಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.