ಬೆಂಗಳೂರು: ‘ಪ್ರಸಕ್ತ ಸಾಲಿನಲ್ಲಿ ₹ 2,900 ಕೋಟಿ ಆಸ್ತಿ ತೆರಿಗೆ ಸಂಗ್ರಹಣೆಗೆ ಗುರಿ ನಿಗದಿಪಡಿಸಲಾಗಿದ್ದು, ಈ ಗುರಿ ಮುಟ್ಟಲು ವಿಶೇಷ ಅಭಿಯಾನ ಪ್ರಾರಂಭಿಸಬೇಕು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಹೇಳಿದರು.
ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷ ಅಭಿಯಾನದಲ್ಲಿ ಕೇವಲ ಕಂದಾಯ ವಿಭಾಗದ ಅಧಿಕಾರಿಗಳು ಮಾತ್ರವಲ್ಲದೆ ಎಲ್ಲಾ ವಿಭಾಗದ ಅಧಿಕಾರಿಗಳು ಭಾಗವಹಿಸಬೇಕು. ಈ ಕುರಿತು ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮೂರು ವರ್ಷಗಳಿಂದ ಪಾಲಿಕೆಯ ಕಂದಾಯ ಅಧಿಕಾರಿಗಳು ವಾರ್ಡ್ವಾರು, ವಲಯವಾರು ಸಂಗ್ರಹಿಸಿರುವ ಆಸ್ತಿತೆರಿಗೆ, ನಿಗದಿಪಡಿಸಲಾದ ಗುರಿ, ಯಾವ ಅಧಿಕಾರಿಗಳು ಗುರಿ ತಲುಪುವದರಲ್ಲಿ ವಿಫಲವಾಗಿದ್ದಾರೆ ಎಂಬ ವಿವರಗಳನ್ನು ಸಂಗ್ರಹಿಸಿ ವರದಿ ನೀಡುವಂತೆ ಕಂದಾಯ ವಿಭಾಗದ ಉಪ ಆಯುಕ್ತರಿಗೆ ತಿಳಿಸಿದರು.
ಸಂಪನ್ಮೂಲ ಕ್ರೋಢೀಕರಣ, ಅನವಶ್ಯಕ ಖರ್ಚುಗಳ ತಡೆಗೆ ಕ್ರಮ ಹಾಗೂ ಪಾಲಿಕೆಯಿಂದ ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಬ್ಬಂದಿ ಕೊರತೆ, ಪಾಲಿಕೆ ಆಸ್ಪತ್ರೆಗಳು, ಆಟದ ಮೈದಾನ, ಜಾಹೀರಾತು, ಕಾನೂನು ವಿಭಾಗ, ಘನತ್ಯಾಜ್ಯ ವಿಲೇವಾರಿ, ಕಾಮಗಾರಿಗಳು ಪಾಲಿಕೆಯ ಮತ್ತಿತರ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.