ಬೆಂಗಳೂರು: ವಿಜಯನಗರ ಎಸ್ಐ ರೂಪಾ ತಂಬದ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಸಂಜೀವ್ಗೌಡ ಅವರ ವಿರುದ್ಧ ಮಂಗಳವಾರ ಇಲಾಖಾ ತನಿಖೆಗೆ ಆದೇಶವಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್ರೆಡ್ಡಿ, ‘ಎಸಿಪಿ ದರ್ಜೆಯ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದು, ಅವರು ಕೊಡುವ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ವರದಿ ಕೊಡಲು ತನಿಖಾಧಿಕಾರಿಗಳಿಗೆ ಯಾವುದೇ ಗಡುವು ನಿಗದಿ ಮಾಡಿಲ್ಲ’ ಎಂದು ಹೇಳಿದರು.
‘ಸಂಜೀವ್ಗೌಡ ಅವರು ಕರ್ತವ್ಯದ ವಿಚಾರವಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಜಪ್ತಿ ಮಾಡಿದ್ದ ಮೊಬೈಲನ್ನು ನಾನು ದುರ್ಬಳಕೆ ಮಾಡಿಕೊಂಡಿದ್ದೇನೆ ಎಂದು ಆರೋಪಿಸಿ ಎಲ್ಲ ಸಿಬ್ಬಂದಿಯ ಎದುರು ನಿಂದಿಸಿದ್ದಾರೆ’ ಎಂದು ರೂಪಾ ಆರೋಪಿಸಿದ್ದರು.
ಇದೇ ವಿಚಾರಕ್ಕೆ ಜುಲೈ 18ರಂದು 25 ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಅವರ ವಿರುದ್ಧವೂ ಆತ್ಮಹತ್ಯೆ ಯತ್ನ ಆರೋಪದಡಿ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿರುಕುಳ ಆರೋಪದ ಬೆನ್ನಲ್ಲೇ, ಗೃಹ ಇಲಾಖೆಯು ಸಂಜೀವ್ಗೌಡ ಅವರನ್ನು ವಿಕಾಸಸೌಧ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.