ಬೆಂಗಳೂರು: ‘ಸಂಗೀತ ಕಲಾ ರತ್ನ’ ವಿದುಷಿ ಎಂ.ಎಸ್.ಶೀಲಾ ಅವರಿಗೆ ವೀಯೆಲ್ಲೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾನದ 2018ನೇ ಸಾಲಿನ ‘ನಿರ್ಮಾಣ್–ಪುರಂದರ ಸಂಗೀತ ರತ್ನ’ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಸ್ವರ್ಣ ಫಲಕ ಒಳಗೊಂಡಿದೆ. 2018ರ ಜನವರಿ 1ರಂದು ನಗರದ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿ.ಲಕ್ಷ್ಮಿನಾರಾಯಣ್ ತಿಳಿಸಿದ್ದಾರೆ.
ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಮೋಹನ್, ವಿ.ಲಕ್ಷ್ಮಿನಾರಾಯಣ್ ಹಾಗೂ ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿ ಶೀಲಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕಲಾವಿದರ ಕುಟುಂಬದಿಂದ ಬಂದ ಹೆಸರಾಂತ ವೀಣಾ ವಾದಕಿ ಶೀಲಾ ಅವರು, ನಾಡಿನಾದ್ಯಂತ ಹಾಗೂ ದೇಶ, ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಅಗ್ರಶ್ರೇಣಿ ಕಲಾವಿದೆಯಾಗಿದ್ದಾರೆ. ಹಂಸಧ್ವನಿ ಕ್ರಿಯೇಷನ್ಸ್ ಸಾಂಸ್ಕೃತಿಕ ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅವರು, ಆಸಕ್ತರಿಗೆ ವೀಣಾವಾದನ ಕಲಿಸುವ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.