ADVERTISEMENT

‘ಎಲೆಕ್ಟ್ರಾನಿಕ್‌ ಮತಯಂತ್ರಗಳು ವಿಶ್ವಾಸಾರ್ಹವಲ್ಲ’

‘ಪ್ರಜಾಪ್ರಭುತ್ವ– ಸಂವಿಧಾನಕ್ಕೆ ಅಪಾಯ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:42 IST
Last Updated 27 ಮೇ 2018, 19:42 IST
ಎಚ್.ಎಸ್.ದೊರೆಸ್ವಾಮಿ ಅವರಿಗೆ ಯಶವಂತ್ ಸಿನ್ಹಾ ಹಸ್ತಲಾಘವ ನೀಡಿದರು. ಬಿ.ಟಿ.ಲಲಿತಾ ನಾಯಕ್, ಕಾರ್ಯಕ್ರಮದ ಸಂಯೋಜಕ ಅಲಿಬಾಬಾ ಹಾಗೂ ಲಕ್ಷ್ಮೀನಾರಾಯಣ ನಾಗವಾರ ಇದ್ದರು
ಎಚ್.ಎಸ್.ದೊರೆಸ್ವಾಮಿ ಅವರಿಗೆ ಯಶವಂತ್ ಸಿನ್ಹಾ ಹಸ್ತಲಾಘವ ನೀಡಿದರು. ಬಿ.ಟಿ.ಲಲಿತಾ ನಾಯಕ್, ಕಾರ್ಯಕ್ರಮದ ಸಂಯೋಜಕ ಅಲಿಬಾಬಾ ಹಾಗೂ ಲಕ್ಷ್ಮೀನಾರಾಯಣ ನಾಗವಾರ ಇದ್ದರು   

ಬೆಂಗಳೂರು: ಎಲೆಕ್ಟ್ರಾನಿಕ್‌ ಮತಯಂತ್ರಗಳು ವಿಶ್ವಾಸಾರ್ಹವಲ್ಲ. ನಾವು ಈ ಹಿಂದೆ ಇದ್ದ ಮತಪತ್ರಗಳ ಮೂಲಕ ಮತದಾನ ಮಾಡುವ ವ್ಯವಸ್ಥೆಗೆ ಹೋಗಬೇಕಾಗಿದೆ ಎಂದು ಹಿರಿಯ ರಾಜಕಾರಣಿ ಯಶವಂತ ಸಿನ್ಹಾ ಹೇಳಿದರು.

ಪ್ರಜಾತಂತ್ರ ಉಳಿಸಲು ಪ್ರಗತಿಪರರ ವೇದಿಕೆ ನಗರದ ಶಾಸಕರ ಭವನದಲ್ಲಿ ಆಶ್ರಯದಲ್ಲಿ ಹಮ್ಮಿಕೊಂಡ ‘ಪ್ರಜಾಪ್ರಭುತ್ವ– ಸಂವಿಧಾನಕ್ಕೆ ಅಪಾಯ’ ವಿಚಾರ‌ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಎಷ್ಟೋ ಮತಯಂತ್ರಗಳು ಮತಗಟ್ಟೆಗೆ ಹೋಗುವುದೇ ಇಲ್ಲ. ಅದನ್ನು ಆಡಳಿತಾರೂಢರು, ಬಲಾಢ್ಯರು ತಡೆಯುವುದೂ ಇದೆ. ಯಂತ್ರಗಳನ್ನು ಹ್ಯಾಕ್‌ (ಮಾಹಿತಿಗೆ ಕನ್ನ ಹಾಕುವುದು) ಮಾಡಬಹುದು ಎಂದು ಹೇಳಿದಾಗ ಚುನಾವಣಾ ಆಯೋಗ ಹಾಗೆ ಮಾಡಿ ನೋಡಿ ಎಂದು ಸವಾಲು ಹಾಕಿತು. ನಮ್ಮ ಮತ
ಯಂತ್ರಗಳನ್ನು ಹ್ಯಾಕ್‌ ಮಾಡಬಹುದು ಎಂದಿತು. ಹಾಗೆ ಮಾಡಲು ಯಂತ್ರಗಳೇನು ಮಾರುಕಟ್ಟೆಯಲ್ಲಿ ಸಿಗುತ್ತವೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ನೋಟು ರದ್ದತಿಯಾದಾಗ ರಿಸರ್ವ್‌ ಬ್ಯಾಂಕ್‌ ಹಾಗೂ ಅದರ ಗವರ್ನರ್‌ ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದು ಗೊತ್ತಿದೆ. ನಾನು ಆರ್ಥಿಕ ಸಮಿತಿಯ ಅಧ್ಯಕ್ಷನಾಗಿದ್ದಾಗ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸುವ ಕುರಿತು ಬಿಜೆಪಿ ಆಸಕ್ತಿಯನ್ನೇ ತೋರಲಿಲ್ಲ. ಈಗ ದಿಢೀರ್‌ ಆಗಿ ಹಾಕಿದ್ದಾರೆ. ಅದೊಂದು ವಿಶೇಷ ಎಂಬಂತೆ ಬಿಂಬಿಸಿದ್ದಾರೆ. ವಾಸ್ತವವಾಗಿ ಅದು ಬೇಯಿಸದ ಅಡುಗೆಯಿದ್ದಂತೆ ಇದೆ’ ಎಂದರು.

‘ವ್ಯವಸ್ಥಿತವಾಗಿ ಸಂವಿಧಾನಬದ್ಧ ಸಂಸ್ಥೆಗಳನ್ನು ಸಮಾಧಿಗೊಳಿಸಲು ಯತ್ನ ನಡೆಯುತ್ತಿದೆ. ಈ ಬಗ್ಗೆ ಮಾಧ್ಯಮಗಳು ಎಚ್ಚೆತ್ತುಕೊಳ್ಳಬೇಕು. ಆದರೆ, ಅವುಗಳನ್ನೂ ಕಾರ್ಪೊರೇಟ್‌ ಮತ್ತು ರಾಜಕೀಯ ಶಕ್ತಿಗಳು ನಿಯಂತ್ರಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕಿ ಬಿ.ಟಿ.ಲಲಿತಾ ನಾಯಕ್‌ ಮಾತನಾಡಿ, ‘ನಾವು ಸಂವಿಧಾನವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಮೆಕಾಲೆಯ ಶಿಕ್ಷಣ ನೀತಿ ಸಾರ್ವತ್ರೀಕರಣ ಆಗದೇ ಇರುತ್ತಿದ್ದರೆ ನಾನು ಈ ಜಾಗದಲ್ಲಿ ಇರುತ್ತಿರಲಿಲ್ಲ. ಜನರಿಗೆ ಸಂವಿಧಾನಾತ್ಮಕ ಸೂಕ್ಷ್ಮಗಳನ್ನು ತಿಳಿಸಿಕೊಡಬೇಕಿದೆ’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ‘ವಿವೇಕದ ಮಾತುಗಳು ಮುಟ್ಟಬೇಕಾದವರಿಗೆ ಮುಟ್ಟಿಲ್ಲ. ಜಾಣತನ ಮೆರೆಯುತ್ತಿದ್ದಾರೆ.
ಪ್ರಧಾನಿ ಮೋದಿಯವರು ವಿವೇಕ ಕಳೆದುಕೊಂಡಿದ್ದಾರೆ. ಬಿಜೆಪಿಯ ಹಿರಿಯರನ್ನೆಲ್ಲಾ ಇಂದಿನ ಆಡಳಿತದಲ್ಲಿರುವವರು ಬದಿಗೆ ಸರಿಸಿ ಕಡೆಗಣಿಸಿದ್ದಾರೆ. ಈ ಹೋರಾಟ ಕರ್ನಾಟಕ ವರ್ಸಸ್‌ ಮೋದಿ’ ಎಂದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಮಾತನಾಡಿ, ‘ಪ್ರಗತಿಪರರು ವಿಘಟನೆಗೊಂಡರೆ ಕೋಮು ಶಕ್ತಿಗಳು ಮುಂದೆ ಬರುತ್ತವೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಸವಣ್ಣನ ಅನುಯಾಯಿಗಳು ಬಿಜೆಪಿ ಬಿಟ್ಟು ಹೊರಬರಬೇಕು’ ಎಂದರು.

* ಸ್ಥಿರ ಸರ್ಕಾರ ಎಂದರೆ ಸರ್ವಾಧಿಕಾರಿ ಸರ್ಕಾರ ಎಂಬಂತೆ ಅರ್ಥೈಸಲಾಗುತ್ತಿದೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು.

– ಯಶವಂತ್‌ ಸಿನ್ಹಾ

* ಮಿತ್ರರ ಜಾಗಕ್ಕೆ ಫ್ರೆಂಡ್ಸ್‌ ಸಭಿಕರ ಕೋರಿಕೆಯ ಮೇರೆಗೆ ಇಂಗ್ಲಿಷ್‌ನಲ್ಲಿ ಭಾಷಣ ಆರಂಭಿಸಿದ ಸಿನ್ಹಾ, ‘ಇಂಗ್ಲಿಷ್‌ನಲ್ಲಿ ಮಾತು ಆರಂಭಿಸಬೇಕಾದರೆ ಫ್ರೆಂಡ್ಸ್‌ ಎಂದು ಹೇಳಿ ಆರಂಭಿಸಬಹುದು.

‘ಮಿತ್ರೋ’ ಎಂದು ಹೇಳಬೇಕಾಗಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣದ ಶೈಲಿಯನ್ನು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.