ADVERTISEMENT

ಕನ್ನಡ ರಾಜ್ಯ ಭಾಷೆಯಾಗಿ ಘೋಷಿಸಲಿ: ‘ಮುಖ್ಯಮಂತ್ರಿ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:52 IST
Last Updated 30 ಜನವರಿ 2015, 19:52 IST

ಬೆಂಗಳೂರು: ‘ಕನ್ನಡವನ್ನು ರಾಜ್ಯ ಭಾಷೆಯಾಗಿ ಘೋಷಣೆ ಮಾಡ ಬೇಕು. ಆಗ ಮಾತ್ರ ಭಾಷಾ ಮಾಧ್ಯ­ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾ­ರಿಸಲು ಸಾಧ್ಯ’ ಎಂದು ಕನ್ನಡ ನುಡಿ–ಗಡಿ ಜಾಗೃತಿ ಸಮಿತಿಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿ, ‘ಮಾತೃ ಭಾಷೆಯಲ್ಲಿ ಶಿಕ್ಷಣ ಕಡ್ಡಾಯ ಎಂಬ ನೀತಿ ಜಾರಿಗೆ ತಂದರೆ ಮತ್ತೆ ಕನ್ನಡಕ್ಕೆ ಹಿನ್ನಡೆಯಾಗುತ್ತದೆ. ರಾಜ್ಯದಲ್ಲಿ ಹಲವು ಭಾಷೆಗಳನ್ನು ಮಾತ­ನಾಡುವ ಜನರಿದ್ದಾರೆ. ಹೀಗಾಗಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲು ಆದೇಶ ಹೊರಡಿಸಬೇಕು’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ, ಪರಿಷ್ಕೃತ ಸರೋಜಿನಿ ಮಹಿಷಿ ವರದಿ ಅನುಷ್ಠಾನ,  ಆಡಳಿತದಲ್ಲಿ ಕನ್ನಡ ಕಡ್ಡಾಯ, ಏಕ ರೀತಿಯ ಸಮವಸ್ತ್ರ ನೀತಿ, ಹಿಂದಿ ಹೇರಿಕೆಗೆ ವಿರೋಧ, ನಾಮ ಫಲಕ, ಜಾಹೀರಾತುಗಳಲ್ಲಿ ಕನ್ನಡಕ್ಕೆ ಆದ್ಯತೆ ಸೇರಿದಂತೆ ವಿವಿಧ ಅಂಶಗಳ ಜಾರಿಗೆ  ಹಕ್ಕೊತ್ತಾಯ ಮಾಡಲು ಫೆ.9ರಿಂದ ‘ನಮ್ಮ ನಡೆ: ನಾಡು, ನುಡಿ, ಗಡಿಗಳ ಕಡೆಗೆ’ ಎಂಬ ಜಾಥಾ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿ ತಾಲ್ಲೂಕುಗಳಿಗೆ ತೆರಳಿ ಕರಪತ್ರ, ಮಾಹಿತಿ ಕೈಪಿಡಿ ಹಂಚ­ಲಾಗುವುದು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ತುಮ­ಕೂರಿ­ನಿಂದ ಜಾಥಾ ಆರಂಭಿಸ­ಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಗಿಂತ ದೊಡ್ಡವರಲ್ಲ
‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೌಜನ್ಯದಿಂದ ಪತ್ರ ಬರೆ­ಯುವ ಅಗತ್ಯ ಇಲ್ಲ. ಕನ್ನಡ ಅನು­ಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲು ಅವ­ರಿಗೆ ಅಧಿ­ಕಾರ ಇದೆ. ಕೌಶಿಕ್‌ ಮುಖರ್ಜಿ ಮುಖ್ಯಮಂತ್ರಿಗಳಿ­ಗಿಂತ ದೊಡ್ಡವ­ರಲ್ಲ. ಅವರು ಕೇವಲ ಸರ್ಕಾರಿ ಅಧಿಕಾರಿ. ಪ್ರಾಧಿ­ಕಾರದ ಅಧ್ಯಕ್ಷ ಎಲ್‌. ಹನುಮಂತಯ್ಯ ಅವರು ಧೈರ್ಯ­ವಾಗಿ ತಮ್ಮ ಕೆಲಸ ಮುಂದುವರಿಸಬೇಕು’
–‘ಮುಖ್ಯಮಂತ್ರಿ’ ಚಂದ್ರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.