ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ನಗರದ ಚಿತ್ರಕಲಾ ಪರಿಷತ್ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೊದಲ ರಾಷ್ಟ್ರೀಯ ಕಲಾ ಪ್ರದರ್ಶನ’ಕ್ಕೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯಕುಮಾರ್ ಸಿಂಗ್ ಚಾಲನೆ ನೀಡಿದರು.
ಕಲಾ ಸಂಕ್ರಾಂತಿ ಪ್ರಶಸ್ತಿ ಪಡೆದ 15 ಕಲಾಕೃತಿಗಳು ಸೇರಿದಂತೆ ಒಟ್ಟು 117 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಾರ್ಚ್ 31ರ ವರೆಗೆ ಪ್ರದರ್ಶನ ಮುಂದುವರಿಯಲಿದ್ದು, ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5ರ ವರೆಗೆ ವೀಕ್ಷಣೆಗೆ ಅವಕಾಶವಿದೆ.
ಅಜಯಕುಮಾರ್ ಸಿಂಗ್ ಮಾತನಾಡಿ, ‘ಸಮಾಜದಲ್ಲಿನ ಅಸಹಿಷ್ಣುತೆ ನಿವಾರಿಸಿ, ಸಾಮರಸ್ಯ ಮೂಡಿಸುವ ವಿಸ್ತೃತ ದೃಷ್ಟಿಕೋನವನ್ನು ಚಿತ್ರಕಲೆ ಹೊಂದಿದೆ. ರಂಗಭೂಮಿ, ಸಾಹಿತ್ಯ, ಚಿತ್ರಕಲೆ ಸೀಮಿತ ಅರ್ಥದ ಆಚೆಗಿನ ವಿಶಾಲತೆಯನ್ನು ಒಗ್ಗೂಡಿಸುತ್ತವೆ. ಇವು ಯಾವುದೇ ಜಾತಿ, ಧರ್ಮದ ಹಂಗಿಲ್ಲದ ಕ್ಷೇತ್ರಗಳಾಗಿವೆ’ ಎಂದು ಅಭಿಪ್ರಾಯಪಟ್ಟರು.
‘ಕಲೆ ಹಾಗೂ ಜೀವನದ ನಡುವೆ ನಿಕಟ ಸಂಬಂಧವಿದೆ. ಈ ವಿಚಾರವನ್ನು ನಾವು ಪದೇ ಪದೇ ಮರೆಯುತ್ತೇವೆ. ಕಲಾಕೃತಿಗಳು ಕಲಾವಿದನ ಭಾವನೆಯ ರೂಪವಾಗಿವೆ. ಆದಿವಾಸಿಗಳ ಕಲೆಗೂ ಸಮಾಜದಲ್ಲಿ ಮನ್ನಣೆಯಿದ್ದು, ಉತ್ತಮ ಮಾರುಕಟ್ಟೆ, ಪ್ರೋತ್ಸಾಹ ಹೆಚ್ಚಿದರೆ ಕಲೆ ಮತ್ತಷ್ಟು ವ್ಯಾಪಕವಾಗಿ ಬೆಳೆಯುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.