ಬೆಂಗಳೂರು: ಉಡುಪಿಯ ಕೋಟದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಸರ್ವಸದಸ್ಯರ ವಿಶೇಷ ಸಭೆ ನಿರ್ಣಯಕ್ಕೆ ತಡೆ ನೀಡಿ ನಗರದ ಎಸಿಎಂಎಂ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.
‘ಕಸಾಪ ಹಾಲಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಮೂರು ವರ್ಷಗಳು. ಆದರೆ, ಅದನ್ನು ಐದು ವರ್ಷಕ್ಕೆ ಹೆಚ್ಚಿಸಿಕೊಳ್ಳಲು ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದೆ. ಇದು ನಿಯಮದ ಉಲ್ಲಂಘನೆ’ ಎಂದು ಆಕ್ಷೇಪಿಸಿ ಕನ್ನಡ ಸಂಘರ್ಷ ಸಮಿತಿಯು ನ್ಯಾಯಾಲಯದ ಮೊರೆ ಹೋಗಿತ್ತು.
ಮಾರ್ಚ್ 26ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಸರ್ವ ಸದಸ್ಯರ ವಿಶೇಷ ಸಭೆಯ ನಡಾವಳಿಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಸಭೆ ಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ಸಂಪೂರ್ಣವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ನ್ಯಾಯಾಧೀಶರು ಸೂಚಿಸಿದರು.
ನಿಯಮಾವಳಿ ಪ್ರಕಾರ, ಗುರುತಿನ ಚೀಟಿ ಇಲ್ಲದ ಸದಸ್ಯರಿಗೆ ಮತದಾನದಲ್ಲಾಗಲೀ, ಸರ್ವಸದಸ್ಯರ ಸಭೆಯಲ್ಲಾಗಲೀ ಭಾಗವಹಿಸುವ ಅವಕಾಶವಿರುವುದಿಲ್ಲ. ಕಸಾಪದ ಸದಸ್ಯರಲ್ಲದವರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಕೊ.ವೆಂ. ರಾಮಕೃಷ್ಣೇಗೌಡ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.