ADVERTISEMENT

ಕಸ ಮಾರಾಟ ಮಾಡಿ ಕಾಸು ಗಳಿಸಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 20:08 IST
Last Updated 12 ಮಾರ್ಚ್ 2017, 20:08 IST
ಹಸಿತ್ಯಾಜ್ಯ ಬಳಸಿ ಜೈವಿಕ ಅನಿಲ ತಯಾರಿಸುವ ಬಗ್ಗೆ ಬಿಬಿಎಂಪಿ ಆಯುಕ್ತ  ಎನ್.ಮಂಜುನಾಥ ಪ್ರಸಾದ್ ಅವರು ಕೆ. ಗೋಪಾಲಯ್ಯ ಅವರಿಗೆ ವಿವರಿಸಿದರು.
ಹಸಿತ್ಯಾಜ್ಯ ಬಳಸಿ ಜೈವಿಕ ಅನಿಲ ತಯಾರಿಸುವ ಬಗ್ಗೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಕೆ. ಗೋಪಾಲಯ್ಯ ಅವರಿಗೆ ವಿವರಿಸಿದರು.   

ಬೆಂಗಳೂರು: ಹಸಿ ತ್ಯಾಜ್ಯವನ್ನು ಬಳಸಿ ಮನೆಯಲ್ಲೇ ಸಾವಯವ ಗೊಬ್ಬರ ತಯಾರಿಸುವುದು ಹೇಗೆ? ಗೊಬ್ಬರ ಮಾರಾಟ ಮಾಡಿ ಹಣ ಗಳಿಸುವುದು ಹೇಗೆ? ಕಸವನ್ನು ಬಳಸಿ ಕಾಸು ಗಳಿಸುವ  ವಿಧಾನಗಳ ಬಗ್ಗೆ ನಂದಿನಿ ಬಡಾವಣೆಯ ನಾಗರಿಕರು ಆಸಕ್ತಿಯಿಂದ ತಿಳಿದುಕೊಂಡರು. 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬಡಾವಣೆಯ ಸರ್ಕ್ಯುಲರ್ ಪಾರ್ಕ್ ಬಳಿ ಭಾನುವಾರ ಏರ್ಪಡಿಸಿದ್ದ ಸಾವಯವ ಸಂತೆ ಇದಕ್ಕೆ ಅವಕಾಶ ಕಲ್ಪಿಸಿತು. 

40ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಾವಯವ ಗೊಬ್ಬರ ತಯಾರಿಸುವ ಸರಳ ಸಾಧನಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು  ಕಸದಿಂದ ಸಾವಯವ ಗೊಬ್ಬರ ತಯಾರಿಸುವ ಹಾಗೂ ಜೈವಿಕ ಅನಿಲ ತಯಾರಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಸಂತೆಯನ್ನು ಉದ್ಘಾಟಿಸಿದ ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ‘ಸಾವಯವ ಗೊಬ್ಬರ ತಯಾರಿಸುವ ಬಗ್ಗೆ ಪ್ರಚುರ ಪಡಿಸುವುದು ಉತ್ತಮ ಕಾರ್ಯಕ್ರಮ. ಇದರಿಂದ ಕಸದ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದರು.

‘ಮನೆಗಳಲ್ಲಿ ಮತ್ತು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಕೈತೋಟಗಳಿಗೆ
ಬಳಸಬಹುದು. ನರ್ಸರಿಗಳಿಗೆ ಹಾಗೂ ರೈತರಿಗೆ ಇದನ್ನು ಮಾರಾಟ ಮಾಡಬಹುದು’ ಎಂದು ಅವರು ಹೇಳಿದರು.

ಸ್ಥಳೀಯ ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್ ಮಾತನಾಡಿ, ‘ನಂದಿನಿ ಬಡಾವಣೆಯನ್ನು ಸ್ವಚ್ಛ ಹಾಗೂ ಮಾದರಿ ಬಡಾವಣೆಯನ್ನಾಗಿ ಮಾಡಲು ಸ್ಥಳೀಯರು ಸಹಕರಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.