ಬೆಂಗಳೂರು: ‘ಕಾನೂನು ಜಿಜ್ಞಾಸೆ ಹೊಂದಿದ ಪ್ರಕರಣಗಳ ವಿಚಾರಣೆಯನ್ನು ಪೂರ್ಣಪೀಠಕ್ಕೆ ವರ್ಗಾಯಿಸಲು ಏಕಸದಸ್ಯ ನ್ಯಾಯಪೀಠಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಈ ಕುರಿತಂತೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಸರಿ ಇಲ್ಲ. ಏಕಸದಸ್ಯ ನ್ಯಾಯಪೀಠ ಏನಿದ್ದರೂ ವಿಭಾಗೀಯ ನ್ಯಾಯಪೀಠಕ್ಕೆ ಮಾತ್ರವೇ ಪ್ರಕರಣ ವರ್ಗಾಯಿಸಬಹುದು’ ಎಂದು ನ್ಯಾಯಮೂರ್ತಿಗಳಾದ ಜಯಂತ್ ಪಟೇಲ್, ರವಿ ಮಳಿಮಠ ಹಾಗೂ ಅರವಿಂದ ಕುಮಾರ್ ಅವರಿದ್ದ ಪೂರ್ಣಪೀಠ ಶುಕ್ರವಾರ ಹೇಳಿದೆ.
‘ಕಾನೂನಿನ ಯಾವ ಅಂಶದಡಿ ಪೂರ್ಣಪೀಠ ವಿಚಾರಣೆ ನಡೆಸಬೇಕು ಎಂಬುದನ್ನು ಏಕಸದಸ್ಯ ನ್ಯಾಯಪೀಠ ನಿರ್ದಿಷ್ಟವಾಗಿ ಗುರುತಿಸಿಲ್ಲ’ ಎಂದೂ ಪೂರ್ಣಪೀಠ ತಿಳಿಸಿದೆ. ಕರ್ನಾಟಕ ಭೂ ದಾಖಲೆಗಳ ತಕರಾರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಈ ಜಿಜ್ಞಾಸೆ ಉದ್ಭವಿಸಿತ್ತು.
‘ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ ವಿಚಾರಣೆ ನಡೆಸುವ ಅರೆ ನ್ಯಾಯಿಕ ಪ್ರಾಧಿಕಾರಗಳ ಆದೇಶವನ್ನು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಬಹುದೇ’ ಎಂದು ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೇಳಿತ್ತು.
‘ಪೂರ್ಣಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿ’ ಎಂದೂ ಆದೇಶಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.