ಬೆಂಗಳೂರು: ಆರು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ದಿನಗೂಲಿಯನ್ನು ನೀಡುವಂತೆ ಆಗ್ರಹಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೋಮವಾರ 50 ಕೈದಿಗಳು ಪ್ರತಿಭಟನೆ ನಡೆಸಿದ್ದರು ಎಂದು ಗೊತ್ತಾಗಿದೆ.
ಪ್ರತಿಭಟನಾನಿರತ ಕೈದಿಗಳು ಜೈಲಿನ ಅಧಿಕಾರಿಗಳನ್ನು ಭೇಟಿಯಾಗಿ ದಿನಗೂಲಿಯನ್ನು ತಮ್ಮ ಬ್ಯಾಂಕಿನ ಖಾತೆಗಳಿಗೆ ಜಮೆ ಮಾಡುವಂತೆ ಒತ್ತಾಯಿಸಿದ್ದಾರೆ.
ದಿನಗೂಲಿ ಪಾವತಿಯಾಗದೆ ಇರುವುದರಿಂದ ಕುಟುಂಬಸ್ಥರಿಗೆ ಹಣ ಕಳುಹಿಸಲು ಕಷ್ಟವಾಗಿದೆ. ಆದಷ್ಟು ತ್ವರಿತವಾಗಿ ದಿನಗೂಲಿ ಸಂದಾಯ ಮಾಡಬೇಕು. ಕಠಿಣವಾಗಿರುವ ಪೆರೋಲ್ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಕೈದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯ ಸರ್ಕಾರದ ಸಮಗ್ರ ಆರ್ಥಿಕ ನಿರ್ವಹಣೆ ವ್ಯವಸ್ಥೆಯಲ್ಲಿ ಉಂಟಾಗಿರುವ ತಾಂತ್ರಿಕ ಕಾರಣದಿಂದ ಕೈದಿಗಳ ದಿನಗೂಲಿಯನ್ನು ಅವರ ಬ್ಯಾಂಕಿನ ಖಾತೆಗಳಿಗೆ ಪಾವತಿಸಲು ಸಾಧ್ಯವಾಗಿಲ್ಲ. ತಾಂತ್ರಿಕ ತೊಡಕು ಪರಿಹಾರವಾದ ಕೂಡಲೇ ಕೈದಿಗಳ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ಜೈಲು ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.