ADVERTISEMENT

‘ಕಾರಾಗೃಹ ಸುಧಾರಣೆ’ ಪುಸ್ತಕ ಬರೆದ ಕೈದಿ!

ಎಂ.ಸಿ ಮಂಜುನಾಥ
Published 2 ನವೆಂಬರ್ 2016, 1:38 IST
Last Updated 2 ನವೆಂಬರ್ 2016, 1:38 IST
‘ಕಾರಾಗೃಹ ಸುಧಾರಣೆ’ ಪುಸ್ತಕ ಬರೆದ ಕೈದಿ!
‘ಕಾರಾಗೃಹ ಸುಧಾರಣೆ’ ಪುಸ್ತಕ ಬರೆದ ಕೈದಿ!   

ಬೆಂಗಳೂರು: 13 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಕೈದಿಯೊಬ್ಬರು, ‘ಸೆರೆವಾಸಿಗಳ ಮನಪರಿವರ್ತನೆಯಲ್ಲಿ ಅಧಿಕಾರಿಗಳ ಪಾತ್ರ’ ಎಂಬ ಪುಸ್ತಕ ಬರೆದಿದ್ದಾರೆ. ಕಾರಾಗೃಹಗಳ ಸುಧಾರಣೆ ವಿಚಾರವನ್ನೇ ಆಧಾರವಾಗಿಟ್ಟುಕೊಂಡು ರಚಿಸಿರುವ ಆ ಹೊತ್ತಿಗೆ ಪ್ರಕಟಣೆಗೆ ಸಿದ್ಧವಾಗಿದೆ. 

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದೊಡ್ಡಬಳ್ಳಾಪುರದ ಜಿ.ಯಲ್ಲಪ್ಪ, ಅಧ್ಯಯನದ ನಿಮಿತ್ತ ರಾಜ್ಯದ ಎಂಟೂ ಸೆಂಟ್ರಲ್‌ ಜೈಲುಗಳಿಗೆ ಹೋಗಿ ವಾಸ್ತವ ಪರಿಸ್ಥಿತಿಯನ್ನು 302 ಪುಟಗಳ ಆ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಜೈಲಿನಲ್ಲಿದ್ದುಕೊಂಡೇ ಅಲ್ಲಿನ ಸುಧಾರಣೆ ಬಗ್ಗೆ ಪುಸ್ತಕ ಬರೆದ ರಾಜ್ಯದ ಮೊದಲ ಕೈದಿ ಎಂಬ ಹೆಗ್ಗಳಿಕೆ ಅವರಿಗೆ ಸಿಕ್ಕಿದೆ.

18 ತಿಂಗಳ ಅಧ್ಯಯನ: ಯಲ್ಲಪ್ಪ ಅವರು ಜೈಲು ಸುಧಾರಣೆ ಬಗ್ಗೆ ಪುಸ್ತಕ ಬರೆಯಲು 2015ರ ಮಾರ್ಚ್ 9ರಂದು ಕಾರಾಗೃಹಗಳ ಇಲಾಖೆ ಎಡಿಜಿಪಿ ಅವರಿಗೆ ಮನವಿ ಸಲ್ಲಿಸಿ ಅನುಮತಿ ಪಡೆದಿದ್ದರು. ಇದೇ ಸೆ.17ಕ್ಕೆ ಕೃತಿ ರಚನೆ ಕಾರ್ಯ ಪೂರ್ಣಗೊಂಡಿದೆ.

ADVERTISEMENT

ಇದೀಗ ಜೈಲಿನಲ್ಲೇ ಇರುವ ಮುದ್ರಣ ಯಂತ್ರದಲ್ಲಿ ಮೂರು ಪ್ರತಿಗಳನ್ನು ಮುದ್ರಿಸಿರುವ ಯಲ್ಲಪ್ಪ, ಪರಿಶೀಲನೆಗಾಗಿ ಅವುಗಳನ್ನು ಮೂವರು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅವರು ಅನುಮತಿ ಕೊಡುತ್ತಿದ್ದಂತೆಯೇ ಪುಸ್ತಕ ಪ್ರಕಟವಾಗಲಿದೆ.

ಇತ್ತೀಚೆಗೆ ಜೈಲಿಗೆ ಬಂದು ತಮ್ಮನ್ನು ಭೇಟಿಯಾದ ಕುಟುಂಬ ಸದಸ್ಯರ ಬಳಿ ಯಲ್ಲಪ್ಪ  ಅವರು ಈ ಬೆಳವಣಿಗೆಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದ ಮಾತುಗಳನ್ನೇ ಸಂಬಂಧಿ ‘ಪ್ರಜಾವಾಣಿ’ಗೆ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.