ADVERTISEMENT

ಕುಮಾರಸ್ವಾಮಿ, ತಮ್ಮಣ್ಣ ವಿರುದ್ಧ ಮುಖ್ಯಮಂತ್ರಿಗೆ ದೂರು: ಹಿರೇಮಠ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಎಸ್‌.ಆರ್. ಹಿರೇಮಠ
ಎಸ್‌.ಆರ್. ಹಿರೇಮಠ   

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮತ್ತು ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ  ವಿರುದ್ಧ ಕ್ರಮ  ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕಿದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್‌.ಆರ್. ಹಿರೇಮಠ ತಿಳಿಸಿದರು.

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಿಗಾನಹಳ್ಳಿಯಲ್ಲಿ 110 ಎಕರೆ ಗೋಮಾಳ, ದಲಿತರು ಮತ್ತು ಬಡವರ ಉಪಜೀವನಕ್ಕೆ ಮಂಜೂರು ಮಾಡಿದ್ದ ಜಮೀನು ಸೇರಿ  200 ಎಕರೆ ಭೂಮಿ ಕಬಳಿಸಿರುವುದು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲೋಕಾಯುಕ್ತರು ವರದಿ ನೀಡಿ ಎರಡು ವರ್ಷ ಕಳೆದಿದೆ. ಆದರೂ  ಕ್ರಮಕ್ಕೆ  ಸರ್ಕಾರ ಮುಂದಾಗಿಲ್ಲ.  ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕಾನೂನು ಸಚಿವ ಟಿ.ಬಿ.  ಜಯಚಂದ್ರ ಅವರಿಗೆ ದೂರು ನೀಡಿದ್ದೇವೆ ಎಂದರು.

‘ಭಾಸ್ಕರರಾವ್  ಪ್ರಮುಖ ಆರೋಪಿ’
ಲೋಕಾಯುಕ್ತ ಸಂಸ್ಥೆಯಲ್ಲಿನ  ಭ್ರಷ್ಟಾಚಾರ ಹಗರಣದಲ್ಲಿ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಅವರೇ ಪ್ರಮುಖ ಆರೋಪಿ ಎಂದು ಹಿರೇಮಠ ಹೇಳಿದರು.

ಭಾಸ್ಕರ ರಾವ್ ಅವರು ಈ ಹಗರಣದ ಪ್ರಮುಖ  ರೂವಾರಿ. ಆದರೂ ಎಸ್‌ಐಟಿ (ವಿಶೇಷ ತನಿಖಾ ತಂಡ) ಅವರನ್ನು 7ನೇ ಆರೋಪ ಮಾಡಿದೆ.  ಒಟ್ಟಾರೆ ಇರುವ 5 ಪ್ರಕರಣಗಳಲ್ಲಿ ನಾಲ್ಕರಿಂದ ಕೈಬಿಟ್ಟು ಒಂದು ಪ್ರಕರಣದಲ್ಲಿ ಮಾತ್ರ ಹೆಸರಿಸಲಾಗಿದೆ. ಉಳಿದ ನಾಲ್ಕು ಪ್ರಕರಣಗಳಲ್ಲೂ ಅವರನ್ನು ಆರೋಪಿಯನ್ನಾಗಿ ಮಾಡಿ ಮತ್ತೊಂದು  ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT