ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಸಿಐಟಿಯು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2015, 20:17 IST
Last Updated 26 ಮೇ 2015, 20:17 IST

ಬೆಂಗಳೂರು: ಒಂದು ವರ್ಷ ಪೂರೈಸಿರುವ ಮೋದಿ ನೇತೃತ್ವ ಎನ್‌ಡಿಎ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ, ‘ಸೆಂಟರ್ ಫಾರ್ ಇಂಡಿಯನ್ ಟ್ರೇಡ್‌ ಯೂನಿ ಯನ್’(ಸಿಐಟಿಯು) ಸದಸ್ಯರು ರಾಜಾಜಿನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜಾಜಿ ನಗರ ವಲಯ ಸಮಿತಿಯ ಕಾರ್ಯದರ್ಶಿ ಎಚ್‌.ಬಿ. ಗಂಗರಾಜು ಅವರು, ‘ ನರೇಂದ್ರ ಮೋದಿ ಅವರ ಸರ್ಕಾರ ಕೇವಲ ಉಳ್ಳವರ ಪರವಾಗಿದೆ. ಸಾಮಾನ್ಯ ಜನರ ಕುರಿತು ಅವರಿಗೆ ಕನಿಷ್ಠ ಕಾಳಜಿಯೂ ಇಲ್ಲ’ ಎಂದರು.

‘ಕಾರ್ಪೊರೇಟ್‌ ಸಂಸ್ಥೆಗಳ ಪರವಾಗಿರುವ ಸರ್ಕಾರ  ಸಂಪತ್ತಿನ ಮೇಲಿನ ತೆರಿಗೆಯನ್ನು ರದ್ದು ಮಾಡಿ, ಜನರ ಮೇಲೆ ಪರೋಕ್ಷ ತೆರಿಗೆಯ ಹೊರೆಯನ್ನು ಹೇರಿದೆ. ಹಿಂದಿನ ಯುಪಿಎ ಸರ್ಕಾರ ಹಗರಣಗಳ ಸರ್ಕಾರ ವಾಗಿದ್ದರೆ, ಇಂದಿನ ಎನ್‌ಡಿಎ ಸರ್ಕಾರ ಜನತೆಯ ಹಕ್ಕುಗಳ ಹರಣ ಮಾಡುವ ಸರ್ಕಾರವಾಗಿದೆ’ ಎಂದು ಅವರು ಟೀಕಿಸಿದರು.

ಬನಶಂಕರಿಯಲ್ಲಿ ಪ್ರತಿಭಟನೆ: ಬನಶಂಕರಿಯ ಬಸ್‌ ನಿಲ್ದಾಣದ ಬಳಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಿಐಟಿಯು ಜಯನಗರ ವಲಯ ಸಮಿತಿಯ ಸದಸ್ಯರು, ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.