ADVERTISEMENT

ಕ್ಯಾಂಟರ್‌ಗೆ ಬೈಕ್‌ ಡಿಕ್ಕಿ: ಡೆಲಿವರಿ ಬಾಯ್ ಸಾವು 

ಮೊಬೈಲ್‌ನಲ್ಲಿ ಮಾತನಾಡುತ್ತ ಬೈಕ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:50 IST
Last Updated 23 ಮಾರ್ಚ್ 2017, 19:50 IST
ಬೆಂಗಳೂರು: ಕಾಮಾಕ್ಷಿಪಾಳ್ಯ ಸಮೀಪದ ಸುಮನಹಳ್ಳಿ ಜಂಕ್ಷನ್ ಬಳಿ ಬುಧವಾರ ನಿಂತಿದ್ದ ಕ್ಯಾಂಟರ್‌ಗೆ ಬೈಕ್‌  ಡಿಕ್ಕಿ ಹೊಡೆದಿದ್ದರಿಂದ ಸವಾರ ಮಧುಸೂದನ್ (23) ಎಂಬುವರು ಮೃತಪಟ್ಟಿದ್ದಾರೆ.
 
ಮದ್ದೂರಿನ ಅವರು ವರ್ಷದ ಹಿಂದೆ ನಗರಕ್ಕೆ ಬಂದು ರಾಜಾಜಿನಗರದ ಹೋಟೆಲ್‌ವೊಂದರಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದರು. ಕಮಲಾ ನಗರದಲ್ಲಿ ಸ್ನೇಹಿತರೊಂದಿಗೆ ವಾಸವಿದ್ದರು.
 
‘ರಾತ್ರಿ ನಾಗರಬಾವಿಗೆ ಹೋಗಿದ್ದ ಮಧುಸೂದನ್‌, ಅಲ್ಲಿಯ ಗ್ರಾಹಕರಿಗೆ ಆಹಾರ ಪೊಟ್ಟಣ ಕೊಟ್ಟು ವಾಪಸ್‌ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಸ್ನೇಹಿತ ಪರಶುರಾಮ್ ನಾಯಕ್ ಸಹ ಅವರ ಜತೆಗಿದ್ದರು.’
 
‘ಸುಮನಹಳ್ಳಿ ಜಂಕ್ಷನ್‌ ಬಳಿ ಬಂದಾಗ ಮಧುಸೂದನ್‌ ಮೊಬೈಲ್‌ಗೆ ಕರೆ ಬಂದಿತ್ತು. ಅದನ್ನು ಸ್ವೀಕರಿಸಿದ್ದ ಅವರು ಮಾತನಾಡುತ್ತಲೇ ಬೈಕ್‌ ಓಡಿಸುತ್ತಿದ್ದರು. ಆಗ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಬೈಕ್‌ ಡಿಕ್ಕಿ ಹೊಡೆದಿತ್ತು’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.
 
‘ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದ ಮಧುಸೂದನ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ. ಘಟನೆಯಲ್ಲಿ ಪರುಶುರಾಮ ಸಹ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯು ತ್ತಿದ್ದಾರೆ’ ಎಂದು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.