ಬೆಂಗಳೂರು: ತುರ್ತು, ಅಪಾಯದ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತ್ವರಿತ ಸೇವೆ ನೀಡುವ ಉದ್ದೇಶವುಳ್ಳ ಹೊಸ ತಂತ್ರಜ್ಞಾನದ 222 ಹೊಯ್ಸಳ ವಾಹನಗಳು ಜುಲೈ 2ರಿಂದ ರಸ್ತೆಗಿಳಿಯಲಿವೆ. ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್, ‘ಸದ್ಯ 184 ಹೊಯ್ಸಳ ವಾಹನಗಳಿದ್ದು, ಅವುಗಳನ್ನು ಆಯಾ ಠಾಣೆ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು. ಅವುಗಳ ಸ್ಥಾನದಲ್ಲಿ ನೂತನ ಹೊಯ್ಸಳ ವಾಹನಗಳು ಓಡಾಡಲಿವೆ’ ಎಂದರು.
‘₹14.65 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿರುವ 222 ಮಾರುತಿ ‘ಎರ್ಟಿಗಾ’ ಕಾರುಗಳಲ್ಲಿ ಟ್ಯಾಬ್, ಜಿಪಿಎಸ್, ಅಂತರ್ಜಾಲ ಸೌಲಭ್ಯವಿದೆ. ಹಾಗಾಗಿ ಎಲ್ಲ ವಾಹನಗಳು ನಿಯಂತ್ರಣ ಕೊಠಡಿಯ ಸಂಪರ್ಕದಲ್ಲಿರಲಿವೆ. ಪ್ರತಿ ಕಾರಿನಲ್ಲಿ ಎಎಸ್ಐ, ಎಚ್ಸಿ, ಚಾಲಕ ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲೂ ನಿತ್ಯ 6 ಮಾರ್ಗಗಳಲ್ಲಿ ಎರಡೆರಡು 3 ವಾಹನಗಳು ಗಸ್ತು ನಡೆಸಲಿವೆ’.
‘ಅಪರಾಧ ಚಟುವಟಿಕೆ ಹಾಗೂ ತುರ್ತು ಸಂದರ್ಭಗಳಲ್ಲಿ ನಾಗರಿಕರು ನಿಯಂತ್ರಣ ಕೊಠಡಿಗೆ (100) ಕರೆ ಮಾಡುತ್ತಿದ್ದಂತೆ ಜಿಪಿಎಸ್ ಮೂಲಕ ಘಟನೆ ನಡೆದಿರುವ ಸ್ಥಳ ಪತ್ತೆಹಚ್ಚಲಾಗುವುದು. ಸ್ಥಳಕ್ಕೆ ಹೋಗುವ ಹೊಯ್ಸಳ ವಾಹನದ ಸಿಬ್ಬಂದಿ, ಸಾರ್ವಜನಿಕರನ್ನು ರಕ್ಷಿಸಬಹುದು. ಗಂಭೀರ ಸ್ವರೂಪದ ಘಟನೆಗಳು ನಡೆದಿದ್ದರೆ ಅದರ ಛಾಯಾಚಿತ್ರ ಹಾಗೂ ವಿಡಿಯೊವನ್ನು ನಿಯಂತ್ರಣ ಕೊಠಡಿಗೆ ಸಿಬ್ಬಂದಿಯು ರವಾನಿಸಲಿದ್ದಾರೆ. ಎಸ್ಎಂಎಸ್, ಇ-ಮೇಲ್, ಫೇಸ್ಬುಕ್ ಹಾಗೂ 100ಕ್ಕೆ ಕರೆ ಮಾಡುವ ಮೂಲಕ ಹೊಯ್ಸಳದ ಸೇವೆ ಪಡೆಯಬಹುದು’ ಎಂದು ಮೇಘರಿಕ್ ವಿವರಿಸಿದರು.
‘ಇ–ಲಾಸ್ಟ್ ರಿಪೋರ್ಟ್’ ಆ್ಯಪ್
‘ಕಳೆದುಹೋದ ಪಾಸ್ಪೋರ್ಟ್, ವೀಸಾ ಹಾಗೂ ಇತರೆ ದಾಖಲೆಗಳ ಹುಡುಕಾಟಕ್ಕೆ ನೆರವಾಗುವ ‘ಇ–ಲಾಸ್ಟ್್ ರಿಪೋರ್ಟ್’ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ’ ಎಂದು ಕಮಿಷನರ್್ ತಿಳಿಸಿದರು.
‘ಸದ್ಯ ದಾಖಲೆಗಳು ಕಳೆದುಹೋದ ಬಗ್ಗೆ ಠಾಣೆಗಳಿಗೆ ಹೆಚ್ಚಿನ ದೂರುಗಳು ಬರುತ್ತಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಆ್ಯಪ್ ಸಿದ್ಧಪಡಿಸಲಾಗಿದೆ. ದಾಖಲೆ ಕಳೆದುಕೊಂಡವರು ಠಾಣೆಗೆ ಹೋಗಿ ದೂರು ನೀಡುವ ಬದಲು, ಆ್ಯಪ್ನಲ್ಲಿ ಸ್ವ–ವಿವರ, ಕಳೆದುಹೋದ ದಾಖಲೆಗಳ ವಿವರ ನಮೂದಿಸಬೇಕು. ಬಳಿಕ ಆ್ಯಪ್ನಲ್ಲಿಯೇ ಸ್ವೀಕೃತಿ ಪತ್ರ ಲಭಿಸಲಿದೆ. ಅದು ಹೊಸ ದಾಖಲೆ ಪಡೆಯಲು ನೆರವಾಗಲಿದೆ. ಜತೆಗೆ ಅವರ ದಾಖಲೆಗಳು ಸಿಕ್ಕರೆ ಮರಳಿ ನೀಡುವ ವ್ಯವಸ್ಥೆ ಇದೆ’ ಎಂದು ಅವರು ಮಾಹಿತಿ ನೀಡಿದರು.
20 ಲಕ್ಷಕ್ಕೂ ಅಧಿಕ ‘ಫಾಲೋವರ್ಸ್’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.