ADVERTISEMENT

ಗುದ್ದಲಿಯಿಂದ ತಮ್ಮನನ್ನು ಕೊಂದ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:50 IST
Last Updated 21 ಜನವರಿ 2017, 19:50 IST
ಗುದ್ದಲಿಯಿಂದ ತಮ್ಮನನ್ನು ಕೊಂದ
ಗುದ್ದಲಿಯಿಂದ ತಮ್ಮನನ್ನು ಕೊಂದ   

ಬೆಂಗಳೂರು: ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಶಂಕೆ ಮೇಲೆ ಭದ್ರತಾ ಸಿಬ್ಬಂದಿಯೊಬ್ಬ, ಗುದ್ದಲಿಯಿಂದ ತಲೆಗೆ ಹೊಡೆದು ತಮ್ಮನನ್ನು ಹತ್ಯೆಗೈದಿರುವ ಘಟನೆ ಮಹಾದೇವಪುರ ಸಮೀಪದ ಮುನಿರೆಡ್ಡಿಲೇಔಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನೇಪಾಳದ ರಾಜೇಶ್ ಬಹದ್ದೂರ್ (25) ಕೊಲೆಯಾದವರು. ಆರೋಪಿ ವೀರ್‌ ಬಹದ್ದೂರ್‌ನನ್ನು ಪೊಲೀಸರು ರಾತ್ರಿಯೇ ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಈ ಸೋದರರು, ಮುನಿರೆಡ್ಡಿಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು.

‘ಸಂಬಂಧಿ ಯುವತಿ ಜತೆ ಇತ್ತೀಚೆಗೆ ನನ್ನ ವಿವಾಹವಾಯಿತು. ಬೇರೆ ಮನೆ ಮಾಡಿದರೆ, ತಮ್ಮ ಒಂಟಿಯಾಗುತ್ತಾನೆ ಎಂದು ಮೂವರೂ ಒಂದೇ ಮನೆಯಲ್ಲಿ ಉಳಿದುಕೊಂಡೆವು. ಕೆಲ ದಿನಗಳಿಂದ ಕೆಲಸಕ್ಕೆ ಹೋಗದ ರಾಜೇಶ್, ಮದ್ಯ ಕುಡಿಯುತ್ತ ಮನೆಯಲ್ಲೇ ಇರುತ್ತಿದ್ದ. ಈ ವೇಳೆ ನನ್ನ ಪತ್ನಿ ಜತೆ ಅನೈತಿಕ ಸಂಬಂಧ ಬೆಳೆಸಿದ್ದ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.

‘ಈ ವಿಚಾರವಾಗಿ ಕೆಲ ದಿನಗಳಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಶನಿವಾರ ಕೂಡ ಆತ ಕೆಲಸಕ್ಕೆ ಹೋಗಿರಲಿಲ್ಲ. ರಾತ್ರಿ 12.30ರ ಸುಮಾರಿಗೆ ಪಾನಮತ್ತನಾಗಿ ಮನೆಗೆ ಹೋದ ನಾನು, ಕೆಲಸಕ್ಕೆ ಗೈರಾದ ಬಗ್ಗೆ ಪ್ರಶ್ನೆ ಮಾಡಿದೆ. ಅಲ್ಲದೆ, ನನ್ನ ಪತ್ನಿಯಿಂದ ದೂರ ಇರುವಂತೆ ಎಚ್ಚರಿಸಿದೆ. ಆಗ ಮಾತಿನ ಚಕಮಕಿ ನಡೆಸಿ, ಏಕಾಏಕಿ ಹಲ್ಲೆ ಮಾಡಿದ. ಇದರಿಂದ ಸಿಟ್ಟು ಬಂದು ನಾನು ಸಹ, ಪಕ್ಕದಲ್ಲೇ ಇದ್ದ ಗುದ್ದಲಿಯಿಂದ ತಲೆಗೆ ಹೊಡೆದೆ’ ಎಂದು ಹೇಳಿದ್ದಾನೆ.

ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ವೀರ್, ನಡೆದ ಘಟನೆಯನ್ನು ಸ್ಥಳೀಯರಿಗೆ ತಿಳಿಸಿ ಪತ್ನಿ ಜತೆ ಪರಾರಿಯಾಗಿದ್ದ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು, ಆರೋಪಿಯನ್ನು ರಾತ್ರಿಯೇ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.