ADVERTISEMENT

ಚುಡಾಯಿಸಿದ್ದಕ್ಕೆ ಜಗಳ ಗೆಳೆಯರಿಂದ ಯುವಕ ಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಬೆಂಗಳೂರು: ಪ್ರೇಯಸಿ ಜತೆಗಿದ್ದಾಗ ಚುಡಾಯಿಸಿದರೆಂದು ಗೆಳೆಯರ ವಿರುದ್ಧ ಕೂಗಾಡಿದ್ದ ಲಕ್ಷ್ಮಣ್ (24) ಎಂಬಾತ, ಕೊನೆಗೆ ಅವರಿಂದಲೇ ಹತ್ಯೆಯಾಗಿದ್ದಾನೆ.
 
ಸದಾಶಿವನಗರ ಸಮೀಪದ ಸಂಜೀವಪ್ಪ ಕಾಲೊನಿಯಲ್ಲಿ ಬುಧವಾರ ರಾತ್ರಿ ಹತ್ಯೆ ನಡೆದಿದೆ. ಈ ಸಂಬಂಧ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.  
 
ಸಂಜೀವಪ್ಪ ಕಾಲೊನಿಯ ಲಕ್ಷ್ಮಣ್, ಕೊಳಾಯಿ ರಿಪೇರಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮನೆ ಸಮೀಪದ ಯುವತಿ ಜತೆ ಆತನಿಗೆ ಪ್ರೇಮಾಂಕುರವಾಗಿತ್ತು. ರಾತ್ರಿ 8.30ರ ಸುಮಾರಿಗೆ ಪ್ರೇಯಸಿಗೆ ಕರೆ ಮಾಡಿದ್ದ ಆತ, ಮಾತನಾಡಲು ಸಮೀಪದ ರೈಲ್ವೆ ಪ್ರದೇಶಕ್ಕೆ ಬರುವಂತೆ ಕರೆದಿದ್ದ.
 
ಲಕ್ಷ್ಮಣ್ ಯುವತಿಯೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ಆತನ ಗೆಳೆಯರು, ‘ಏನೋ ನಮಗೆ ಹೇಳದೆ ಬಂದಿದ್ದೀಯಾ. ನೀವು ಕದ್ದು 
ಮುಚ್ಚಿ ಪ್ರೀತಿಸಿದರೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದೀಯಾ’ ಎಂದಿದ್ದಾರೆ.
 
ತಮಗೆ ತೊಂದರೆ ಕೊಡದಂತೆ ಲಕ್ಷ್ಮಣ್ ಏರುಧ್ವನಿಯಲ್ಲಿ ಕೂಗಾಡಿದ್ದರಿಂದ ವಾಗ್ವಾದ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆರೋಪಿಗಳು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ.
 
ಜೀವಭಯದಿಂದ ಓಡಿದ ಯುವತಿ, ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಕೃತ್ಯದ ಬಳಿಕ ಸಮೀಪದ ಸ್ನೇಹಿತನ ಮನೆಯಲ್ಲಿ ಅಡಗಿದ್ದ ಆರೋಪಿಗಳನ್ನು ರಾತ್ರಿಯೇ ವಶಕ್ಕೆ ಪಡೆಯಲಾಗಿದೆ ಎಂದು ಸದಾಶಿವನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.