ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯತೆಗಾಗಿ ತರಾತುರಿಯಲ್ಲಿ ಅಕ್ರಮ–ಸಕ್ರಮಕ್ಕೆ ಕೈಹಾಕಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಟೀಕಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿಯಲ್ಲಿ ಮಾತನಾಡಿ, ಸರ್ಕಾರದ ಈ ಕ್ರಮದಿಂದ ನೂರಾರು ಜನರಿಗೆ ಮೋಸ ಆಗಲಿದೆ ಎಂದು ಹೇಳಿದರು.
‘ಹೇರೋಹಳ್ಳಿ ವಾರ್ಡ್ನ ಲಿಂಗಧೀರನಹಳ್ಳಿಯಲ್ಲಿ ಭೂ ಅಕ್ರಮ ನಡೆದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಸರ್ಕಾರದ ಡಿ ಗ್ರೂಪ್ ನೌಕರರಿಗಾಗಿ ಇಲ್ಲಿನ ರೈತರಿಂದ ಭೂಮಿ ಪಡೆದು, ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಲು ತೀರ್ಮಾನಿಸಲಾಗಿತ್ತು. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಬಳಿಕ ಅಕ್ರಮ ನಡೆದಿದೆ’ ಎಂದು ದೇವೇಗೌಡರು ಕಿಡಿಕಾರಿದರು.
‘ನನ್ನ ಡ್ರೈವರ್ ದುಡ್ಡು ಕಟ್ಟಿದ್ದರೂ ನಿವೇಶನ ಸಿಕ್ಕಿಲ್ಲ. ಡಿ ಗ್ರೂಪ್ ನೌಕರರ ಜತೆ ಬೇರೆಯವರಿಗೂ ನಿವೇಶನ ನೀಡಲಾಗಿದೆ. ಇದೀಗ 2 ಎಕರೆ 10 ಗುಂಟೆ ಉದ್ಯಾನದ ಜಾಗವನ್ನೂ ಅಕ್ರಮ ಮಾಡಿಕೊಂಡು ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಮುಂದೆ ಅಕ್ರಮ ಸಕ್ರಮದ ಹೆಸರಿನಲ್ಲಿ ಇದೂ ಸಕ್ರಮ ಆಗುತ್ತದೆ. ಸ್ಥಳೀಯ ರಾಜಕಾರಣಿಗಳ ಪ್ರಭಾವ ಇಲ್ಲದೆ ಇವೆಲ್ಲ ನಡೆಯುವುದಿಲ್ಲ’ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.