ADVERTISEMENT

ತರಕಾರಿ ಪೂರೈಕೆ ಏರಿಕೆ, ಬೆಲೆ ಇಳಿಕೆ

ಶ್ರಾವಣ ಮಾಸದಲ್ಲಿ ಗ್ರಾಹಕರಿಗೆ ಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 20:08 IST
Last Updated 27 ಆಗಸ್ಟ್ 2016, 20:08 IST
ತರಕಾರಿ ಪೂರೈಕೆ ಏರಿಕೆ, ಬೆಲೆ ಇಳಿಕೆ
ತರಕಾರಿ ಪೂರೈಕೆ ಏರಿಕೆ, ಬೆಲೆ ಇಳಿಕೆ   

ಬೆಂಗಳೂರು: ಶ್ರಾವಣ ಮಾಸದಲ್ಲಿ ತರಕಾರಿ, ಸೊಪ್ಪುಗಳ ಬೆಲೆಯು ಕೊಂಚ ಇಳಿಮುಖವಾಗಿದ್ದು ಗ್ರಾಹಕರಲ್ಲಿ ಸಮಾಧಾನ ಮೂಡಿಸಿದೆ. ಕಳೆದ 15 ದಿನಗಳಲ್ಲಿ ತರಕಾರಿಯ ಬೆಲೆಯಲ್ಲಿ ಶೇ 10ರಷ್ಟು  ಇಳಿಕೆಯಾಗಿದೆ. ಉತ್ತಮ ಮಳೆಯಿಂದ ಸೊಪ್ಪು, ತರಕಾರಿಗಳ ಉತ್ಪಾದನೆ ಹೆಚ್ಚಳವಾಗಿದ್ದು, ಮಾರುಕಟ್ಟೆಯಲ್ಲಿ ತರಕಾರಿಯ ಪೂರೈಕೆ ಹೆಚ್ಚಾಗಿದೆ.

ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ತರಕಾರಿಗಳ ಬೆಲೆ ತುಸು ಹೆಚ್ಚಾಗಿ ಇರುತ್ತದೆ. ಆದರೆ, ಈ ಬಾರಿ ಉತ್ತಮ ಮಳೆಯ ಹಿನ್ನೆಲೆಯಲ್ಲಿ  ತರಕಾರಿಗಳ ಪೂರೈಕೆ ಹೆಚ್ಚಾಗಿರುವುದರಿಂದ  ಬೆಲೆಯು ಒಂದೇ ರೀತಿ ಮುಂದುವರೆಯುತ್ತಿದೆ.

ಮಾರುಕಟ್ಟೆಯಲ್ಲಿ  ಬೀಟ್‌ರೂಟ್‌, ತೊಂಡೆಕಾಯಿ, ಹಿರೇಕಾಯಿ, ಗೆಡ್ಡೆಕೋಸು, ಬೆಂಡೆಕಾಯಿ, ಹಿರೇಕಾಯಿ, ಈರುಳ್ಳಿ ಕೆಜಿಗೆ ₹ 15 ರಿಂದ 20ರಂತೆ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿವೆ. ಅವರೆಕಾಯಿ, ಕ್ಯಾರೆಟ್‌, ಆಲೂಗಡ್ಡೆ ಸೇರಿದಂತೆ 3–4 ತರಕಾರಿಗಳ ಬೆಲೆ ತುಸು ಜಾಸ್ತಿ ಎನ್ನುವುದನ್ನು ಬಿಟ್ಟರೇ ಇನ್ನುಳಿದ ಎಲ್ಲ ತರಕಾರಿಗಳ ಬೆಲೆ ಕೈಗೆಟುಕುವ ದರದಲ್ಲಿದೆ. ಟೊಮೆಟೊ ಒಂದು ಕೆ.ಜಿ.ಗೆ ₹9 ರೂಪಾಯಿ ಆಗಿದೆ. ದೊಣ್ಣೆ ಮೆಣಸಿನಕಾಯಿ ಕೆಜಿಗೆ 30,  ಹಸಿ ಮೆಣಸಿನಕಾಯಿ ಬೆಲೆ ₹20 ರೂ ಗೆ ಇಳಿದಿದೆ.

ಸೊಪ್ಪುಗಳ ಬೆಲೆ ಇಳಿಮುಖವಾಗಿದೆ. ಒಂದು ಕಟ್ಟು ಕೊತ್ತಂಬರಿ ಮತ್ತು ಮೆಂತ್ಯೆ ಸೊಪ್ಪಿಗೆ ಕಳೆದ ಹದಿನೈದು ದಿನಗಳ  ಹಿಂದೆ ₹15 ಇತ್ತು. ಈಗ ಅದು ₹5 ಗೆ ಸಿಗುತ್ತಿದೆ.‘ಶ್ರಾವಣ ಮಾಸದಲ್ಲಿ ತರಕಾರಿ ಬೆಲೆ ಹೆಚ್ಚಾಗಿಯೇ ಇರಬೇಕಿತ್ತು. ಯಾಕೆಂದರೆ ಮಾಂಸಾಹಾರ ಸೇವನೆ ಮಾಡುವವರ ಸಂಖ್ಯೆ ಕಡಿಮೆ ಇರುವುದರಿಂದ ತರಕಾರಿ ಬಳಕೆ  ಜಾಸ್ತಿ ಇರುತ್ತಿತ್ತು. ಆದರೆ ಈ ಬಾರಿ ಉತ್ತಮ ಮಳೆಯಿಂದ ತರಕಾರಿ ಉತ್ಪಾದನೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ  ಎಲ್ಲ ತರಕಾರಿಗಳ ಪೂರೈಕೆ ಹೆಚ್ಚಾಗಿ ಬರುತ್ತಿದೆ.

ಹೀಗಾಗಿ ತರಕಾರಿ ಬೆಲೆಯು ಇಳಿಕೆಯು ಆಗಿಲ್ಲ, ಏರಿಕೆಯು ಆಗಿಲ್ಲ ಒಂದೇ ತರನಲ್ಲಿ ಇದೆ. ಮುಂದಿನ ದಿನಗಳಲ್ಲಿ ಮಳೆ ಕೈ ಕೊಟ್ಟರೆ ತರಕಾರಿಗಳ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬೆಳ್ಳೂರು ಕೃಷ್ಣ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.