ಬೆಂಗಳೂರು: ‘ಭಾರತೀಯತೆ ಪರಿಕಲ್ಪನೆಯನ್ನು ಇತ್ತೀಚೆಗೆ ಸೀಮಿತ ಚೌಕಟ್ಟಿನೊಳಗೆ ಬಂಧಿಸಿ, ಅದರ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಪ್ರಾದೇಶಿಕ ಹಾಗೂ ದೇಸೀ ಸಂಸ್ಕೃತಿ ತುಳಿಯುವ ಪ್ರಯತ್ನ ನಡೆಯುತ್ತಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಕಳವಳ ವ್ಯಕ್ತಪಡಿಸಿದರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜು ಹಾಗೂ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ದೇಸೀ ದಿನದ ಸಂಭ್ರಮಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಭಾರತೀಯತೆಯು ಎಲ್ಲಾ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಉಪಸಂಸ್ಕೃತಿ ಒಳಗೊಂಡಿದೆ. ಅದನ್ನು ಸಂಕುಚಿತಗೊಳಿಸಿ, ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸಿದರೆ ಅದಕ್ಕೆ ಅರ್ಥ ಇರುವುದಿಲ್ಲ. ವಿವಿಧತೆ ಹಾಗೂ ಪ್ರಾದೇಶಿಕ ಸೊಗಡು ತನ್ನೊಳಗೆ ತುಂಬಿಸಿಕೊಂಡಾಗ ಮಾತ್ರ ಭಾರತೀಯತೆ ಮೈದಳೆಯುತ್ತದೆ. ಕನ್ನಡಿಗರು ಕನ್ನಡ ಮಾತನಾಡಲು, ಸಂಸ್ಕೃತಿ ಅನಾವರಣಗೊಳಿಸಲು ಹಿಂಜರಿಯಬಾರದು. ನಮ್ಮ ಭಾಷೆ, ಸಂಸ್ಕೃತಿ ಹಾಗೂ ಆಚರಣೆಗಳು ನಮ್ಮ ವ್ಯಕ್ತಿತ್ವ ರೂಪಿಸಿರುವುದನ್ನು ಮರೆಯಬಾರದು’ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಆರ್.ಶೆಟ್ಟಿ, ರಾಜ್ಯ ಇಂದು ವಿಶ್ವದಲ್ಲೇ ವಿಶೇಷ ಮನ್ನಣೆ ಪಡೆದಿದೆ. ಬೆಂಗಳೂರು ನಗರ ಕಳೆದ 25 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ಸೂಕ್ತ ನೆಲೆಯಾಗಿದೆ. ಜಗತ್ತಿನ ತಂತ್ರಜ್ಞಾನ ಭೂಪಟದಲ್ಲಿ ಮಹತ್ವದ ಸ್ಥಾನ ಗಳಿಸಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.