ಬೆಂಗಳೂರು: ವೈಟ್ ಟಾಪಿಂಗ್ ಮಾಡಲಾಗಿರುವ ನಗರದ ಧನ್ವಂತ್ರಿ ರಸ್ತೆಯನ್ನು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಶನಿವಾರ ಉದ್ಘಾಟಿಸಿ ಸಂಚಾರಮುಕ್ತ ಮಾಡಿದರು.
ಕೆಂಪೇಗೌಡ ಬಸ್ ನಿಲ್ದಾಣವನ್ನು ಸ್ಲಂ ಬೋರ್ಡ್ ಜಂಕ್ಷನ್ಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಆರಂಭಿಸಲಾಗಿತ್ತು. ಕಾಮಗಾರಿ ಮುಗಿಸಲು ಬಿಬಿಎಂಪಿಯು ಗುತ್ತಿಗೆದಾರರಿಗೆ ಆರು ತಿಂಗಳ ಗಡುವು ನಿಗದಿ ಪಡಿಸಿತ್ತು. ಗಡುವಿನ ಅವಧಿ ಮುಗಿಯಲು ಎರಡು ತಿಂಗಳು ಇರುವಾಗಲೇ ನಾಲ್ಕು ಪಥದ ರಸ್ತೆ ಜನಬಳಕೆಗೆ ಮುಕ್ತವಾಗಿದೆ.
ರಸ್ತೆಗೆ ವೈಟ್ ಟಾಪಿಂಗ್ ಮಾಡಿದಲ್ಲದೇ ಎರಡೂ ಬದಿಗಳ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ರಸ್ತೆ ವಿಭಜಕದ ಸ್ಥಳದಲ್ಲಿ ಅಲಂಕಾರಿಕ ಸಸಿಗಳನ್ನು ನೆಡಲಾಗಿದೆ. ಇದರಿಂದ ರಸ್ತೆಯ ಮೆರಗು ಇನ್ನಷ್ಟು ಹೆಚ್ಚಿದೆ. ಸಾರ್ವಜನಿಕರ ಅನುಕೂಲತೆಗಾಗಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ.
‘ಈ ಮೊದಲು ರಸ್ತೆ ಗುಂಡಿಗಳಿಂದ ಕೂಡಿತ್ತು. ಇಲ್ಲಿ ವಾಹನ ಚಾಲನೆ ಕಷ್ಟಕರವಾಗಿತ್ತು. ರಸ್ತೆ ನವೀಕರಣಗೊಂಡಿದ್ದರಿಂದ ಸರಾಗವಾಗಿ ಬಸ್ ಓಡಿಸಬಹುದು. ನಗರದ ಎಲ್ಲ ರಸ್ತೆಗಳು ಇದೇ ರೀತಿ ಆದರೆ ಉತ್ತಮ’ ಎನ್ನುತ್ತಾರೆ ಬಿಎಂಟಿಸಿ ಬಸ್ ಚಾಲಕ ಶರಣಪ್ಪ.
ಆಟೊ ಚಾಲಕ ಮೆಹಮೂದ್ ಮಾತನಾಡಿ,‘ಕಳೆದ ಬೇಸಿಗೆಯಲ್ಲಿ ಇಲ್ಲಿ ದೂಳು ಹಾರಾಡುತ್ತಿತ್ತು. ಈಗ ರಸ್ತೆಗೆ ಹೊಸ ರೂಪ ನೀಡಿದ್ದಾರೆ. ಮತ್ತ್ಯಾವುದೋ ಕಾಮಗಾರಿಗೆಂದು ಈ ರಸ್ತೆಯನ್ನು ಅಗೆಯದಿದ್ದರೇ ಒಳ್ಳೆಯದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.