ADVERTISEMENT

ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ

15 ಕಡೆ ಧರೆಗುರುಳಿದ ಮರದ ಕೊಂಬೆಗಳು

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:49 IST
Last Updated 22 ಮೇ 2017, 19:49 IST
ಎಂ.ಜಿ. ರಸ್ತೆಯ ಬಳಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಸಿಡಿಲು
ಎಂ.ಜಿ. ರಸ್ತೆಯ ಬಳಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಸಿಡಿಲು   

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಗುಡುಗು, ಬಿರುಗಾಳಿ ಸಹಿತ ಜೋರಾಗಿ ಮಳೆ ಸುರಿದಿದೆ. ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ.
ರಾಜ್‌ಮಹಲ್ ಗುಟ್ಟಹಳ್ಳಿಯಲ್ಲಿ 110, ರಾಜಾಜಿನಗರದಲ್ಲಿ 86, ದಯಾನಂದನಗರದಲ್ಲಿ 52 ಹಾಗೂ ಚಿಕ್ಕನಹಳ್ಳಿಯಲ್ಲಿ 50 ಮಿಲಿಮೀಟರ್ ಮಳೆಯಾಗಿದೆ.

ಶಾಂತಿನಗರ, ರಿಚ್ಮಂಡ್ ವೃತ್ತ, ಮೆಜೆಸ್ಟಿಕ್, ಡಬಲ್ ರೋಡ್, ಕೆ.ಆರ್.ಮಾರುಕಟ್ಟೆ, ಮೈಸೂರು ರಸ್ತೆ, ಲಾಲ್‌ಬಾಗ್, ಕೋರಮಂಗಲ, ಮಲ್ಲೇಶ್ವರ, ಬಸವೇಶ್ವರ ನಗರ, ಕೆಂಗೇರಿ, ರಾಜ ರಾಜೇಶ್ವರಿನಗರ,  ಯಶವಂತಪುರ, ಯಲಹಂಕದಲ್ಲಿ ಮಳೆಯಾಗಿದೆ.  

ಎಚ್‌.ಎಸ್‌.ಆರ್‌ ಲೇಔಟ್‌, ಎಂ.ಜಿ. ರಸ್ತೆ, ಹಲಸೂರು, ಪೀಣ್ಯ, ಜಾಲಹಳ್ಳಿ, ಯಶವಂತಪುರ, ಮತ್ತಿಕೆರೆ, ಬಸವನ ಗುಡಿ, ಬನಶಂಕರಿ, ಚಾಮರಾಜಪೇಟೆ, ಹನುಮಂತನಗರ, ವಿದ್ಯಾರಣ್ಯಪುರ, ಆರ್.ಟಿ.ನಗರ, ಮಡಿವಾಳ, ಕೋರ ಮಂಗಲ, ಲಗ್ಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲೂ ಮಳೆಯಾಗಿದೆ.
ಈ ಭಾಗದ ಬಹುತೇಕ ರಸ್ತೆಗಳಲ್ಲಿ  ನೀರು ಹರಿದಿದ್ದು, ಕೆಲವೆಡೆ ಚರಂಡಿ ಮುಚ್ಚಿಕೊಂಡು ರಸ್ತೆ ಮೇಲೆ ನೀರು ನಿಂತಿದ್ದು ಕಂಡು ಬಂತು.


ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಜಂಕ್ಷನ್ ಬಳಿಯ ರಸ್ತೆ ಮೇಲೆ ಮಳೆ ನೀರು ನಿಂತಿತ್ತು

ರಿಚ್ಮಂಡ್ ರಸ್ತೆಯಲ್ಲಿ ಎರಡು ಅಡಿ ಎತ್ತರದಷ್ಟು ಮಳೆ ನೀರು ಹರಿದ ಕಾರಣ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಇನ್ನು ಶಿವಾನಂದ ವೃತ್ತ, ಟಿನ್‌ಫ್ಯಾಕ್ಟರಿ, ಎನ್‌ಜಿಎಫ್, ಕಾರ್ಪೊರೇಷನ್ ಬಳಿ ರಸ್ತೆ ಮೇಲೆ ನೀರು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು.

ಶಿವಾನಂದ ವೃತ್ತದ ರೈಲ್ವೆ ಹಳಿಯ ಮೇಲ್ಸೇತುವೆ ಕೆಳಭಾಗದಲ್ಲಿ ನೀರು ತುಂಬಿಕೊಂಡಿತ್ತು. ರೇಸ್‌ಕೋರ್ಸ್‌ ವೃತ್ತದಿಂದ ಶೇಷಾದ್ರಿಪುರ ಹಾಗೂ ಮಲ್ಲೇಶ್ವರಕ್ಕೆ ಹೊರಟಿದ್ದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. 

ಕೊಂಬೆ ಬಿದ್ದು ಮಿನಿ ಬಸ್  ಜಖಂ: ವೈಯಾಲಿಕಾವಲ್ ಬಸ್ ನಿಲ್ದಾಣದ ಬಳಿ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಮಿನಿ ಬಸ್‌ ಜಖಂಗೊಂಡಿದೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಶಂಕರಮಠ, ವಿಜಯನಗರ, ರಾಜರಾಜೇಶ್ವರಿನಗರ, ಮೋದಿ ಆಸ್ಪತ್ರೆ, ಶಾಂತಿನಗರ, ಆರ್‌.ಟಿ.ನಗರ, ಕಾವೇರಿ ಜಂಕ್ಷನ್‌, ರಾಜಾಜಿನಗರ, ಬಸವೇಶ್ವರ ನಗರ, ಆರ್‌.ಟಿ.ನಗರ, ಎಚ್‌.ಎಸ್‌.ಆರ್‌. ಲೇಔಟ್‌ ಸೇರಿ ಒಟ್ಟು 15 ಕಡೆಗಳಲ್ಲಿ ಮರದ ಕೊಂಬೆಗಳು ನೆಲಕ್ಕುರುಳಿವೆ.

ವಿಜಯನಗರದಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು, ಮರದ ಕೊಂಬೆ ರಸ್ತೆಯ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕೆಲವೆಡೆ ಬಿಬಿಎಂಪಿ ಸಿಬ್ಬಂದಿ ರಾತ್ರಿಯೇ ಕೊಂಬೆಗಳನ್ನು ತೆರವುಗೊಳಿಸಿದರು.

ಹಲವೆಡೆ ವಿದ್ಯುತ್ ಕಡಿತ: ಬಿರುಗಾಳಿ ಹಾಗೂ ಮಳೆ ಹೆಚ್ಚಾಗಿದ್ದರಿಂದ ನಗರದ ಹಲವೆಡೆ ವಿದ್ಯುತ್ ಕಡಿತಗೊಂಡಿತ್ತು. ಜೆ.ಪಿ. ನಗರ, ಜಯನಗರ, ಕೆ.ಆರ್.
ಪುರ, ಬನಶಂಕರಿ, ಪದ್ಮನಾಭನಗರ, ಬಸವನಗುಡಿ ಹಾಗೂ ಕುಮಾರ ಸ್ವಾಮಿ ಲೇಔಟ್‌, ಜಕ್ಕಸಂದ್ರ, ಕೋರಮಂಗಲ ಸೇರಿದಂತೆ ನಗರದ ಬಹುತೇಕ ಕಡೆ ಮೂರು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.