ಬೆಂಗಳೂರು: ಉದ್ಯಾನ ನಗರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿದ್ದ ಮಳೆ ಶನಿವಾರ ಸಂಜೆ ಮತ್ತೆ ಅಬ್ಬರಿಸಿದೆ. ಧಾರಾಕಾರ ಮಳೆಯಿಂದಾಗಿ ನಗರದ ವಿವಿಧ ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗಿದ್ದವು.
ಮಧ್ಯಾಹ್ನದಿಂದಲೇ ಮೋಡಕಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ 4 ಗಂಟೆ ವೇಳೆಗೆ ಗುಡುಗು ಸಹಿತ ಮಳೆ ಸುರಿಯಿತು. ಸುಮಾರು ಎರಡು ಗಂಟೆ ಕಾಲ ಅಬ್ಬರಿಸಿತು. ವಾರಾಂತ್ಯದ ಮಜೆಯ ಖುಷಿಯಲ್ಲಿ ಮನೆಯಿಂದ ಹೊರಟವರು ಮಳೆಗೆ ಸಿಲುಕಿ ತೊಂದರೆ ಅನುಭವಿಸಿದರು.
ಮನೆಗಳಿಗೆ ನುಗ್ಗಿದ ನೀರು: ಚಾಮರಾಜಪೇಟೆಯ ರೈತರ ಸಂತೆ ಬೀದಿ, ಚೆನ್ನಮ್ಮನ ಅಚ್ಚುಕಟ್ಟು, ಜರ್ನಲಿಸ್ಟ್ ಕಾಲೋನಿ, ನಾಯಂಡಹಳ್ಳಿಯ ಮೇಲ್ಸೇತುವೆ ಬಳಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಇಲ್ಲಿನ ತಗ್ಗು ಪ್ರದೇಶದ ನಿವಾಸಿಗಳು ಭಾರಿ ತೊಂದರೆ ಅನುಭವಿಸಿದರು.
ಧರೆಗುರುಳಿದ ಮರಗಳು: ಭಾರಿ ಮಳೆಯಿಂದಾಗಿ ಸರ್ಜಾಪುರ ಅಗ್ರಹಾರ, ಎಂ.ಸಿ.ಬಡಾವಣೆಯ ಬಿಡಿಎ ಸಂಕೀರ್ಣ, ಮಲ್ಲೇಶ್ವರ 13ನೇ ಅಡ್ಡರಸ್ತೆ ಹಾಗೂ ಜಯನಗರದ ಮೂರನೇ ಹಂತದ ಸಾಲಿಗ್ರಾಮದಲ್ಲಿ ಮರಗಳು ಧರೆಗುರುಳಿವೆ. ಕೆಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ರಸ್ತೆಗಳು ಜಲಾವೃತ: ರಭಸದ ಮಳೆಯಿಂದಾಗಿ ಮೆಜೆಸ್ಟಿಕ್, ಮೈಸೂರು ರಸ್ತೆ, ಮೆಕ್ರಿ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾಯಿತು. ಹಳೇ ವಿಮಾನ ನಿಲ್ದಾಣ ರಸ್ತೆ, ಕಸ್ತೂರಬಾ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ಕಾರ್ಪೊರೇಷನ್, ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿನ ರಸ್ತೆಗಳು ಜಲಾವೃತವಾಗಿದ್ದವು. ಕೆಲವೆಡೆ ಚರಂಡಿ ನೀರು ರಸ್ತೆಯ ಮೇಲೆ ಹರಿಯಿತು.
41.7 ಮಿ.ಮೀ. ಮಳೆ
ಹವಾಮಾನ ಇಲಾಖೆ ಪ್ರಕಾರ ನಗರದಲ್ಲಿ ಶನಿವಾರ ರಾತ್ರಿ 8.30ರ ವೇಳೆಗೆ 41.7 ಮಿ.ಮೀ. ಮಳೆಯಾಗಿತ್ತು. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 15.2 ಮಿ.ಮೀ, ಯಲಹಂಕದಲ್ಲಿ 23.1 ಮಿ.ಮೀ. ಮಳೆ ದಾಖಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.