ADVERTISEMENT

‘ನಮ್ಮೂರ ಹಬ್ಬ’ಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 20:02 IST
Last Updated 22 ಜನವರಿ 2017, 20:02 IST
ಉತ್ಸವದಲ್ಲಿದ್ದ ಹುಲಿವೇಷದ  ಪ್ರತಿಕೃತಿ ನೋಡುಗರ ಗಮನಸೆಳೆಯಿತು
ಉತ್ಸವದಲ್ಲಿದ್ದ ಹುಲಿವೇಷದ ಪ್ರತಿಕೃತಿ ನೋಡುಗರ ಗಮನಸೆಳೆಯಿತು   

ಬೆಂಗಳೂರು: ನಗರದಲ್ಲಿ ಎರಡು ದಿನಗಳವರೆಗೆ ನಡೆದ ‘ನಮ್ಮೂರ ಹಬ್ಬ–2017’ ಕರಾವಳಿ ಉತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಉತ್ಸವದಲ್ಲಿ ಕರಾವಳಿಯ ಖಾದ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಲೆಗಳು ಅನಾವರಣಗೊಂಡವು.

ಮೊದಲ ದಿನ ಉದ್ಘಾಟನಾ ಸಮಾರಂಭದ ಬಳಿಕ ಕಲಾವಿದರು, ‘ಕರಾವಳಿ ವೈಭವ’ ವಿಶೇಷ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ವಿನಯ್‌ ನಾಡಿಗ್‌–ಸುಪ್ರಿಯಾ ರಘುನಂದನ್‌, ಸಾನ್ಸಿ ಶೆಟ್ಟಿ–ಅಭಿನವ್ ಭಟ್‌ ಅವರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ  ಮುದ ನೀಡಿತು.

ರಾಘವೇಂದ್ರ ಹೆಗಡೆ ಅವರ ಮರಳು ಚಿತ್ರ ಹಾಗೂ ಚಂದನ್‌ ಶೆಟ್ಟಿ ಅವರ ಕನ್ನಡ ರ್‌್ಯಾಪ್‌ ಗೀತೆಗಳು ಉತ್ಸವಕ್ಕೆ ಮೆರುಗು ತಂದವು.
ಉತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಕರಾವಳಿಯ ಅಂತರರಾಷ್ಟ್ರೀಯ ಕಲಾವಿದರ ನೃತ್ಯೋತ್ಸವ ಹಾಗೂ ಗಾಯಕಿ ಎಂ.ಡಿ. ಪಲ್ಲವಿ ಅವರ ಗಾಯನ ಮನಸೊರೆಗೊಂಡಿತು. ‘ಡ್ರಾಮಾ ಜೂನಿಯರ್ಸ್‌’ ಖ್ಯಾತಿಯ ಬಾಲನಟರಾದ ಅಚಿಂತ್ಯ, ಮಹೇಂದ್ರ, ತುಷಾರ್‌ ಹಾಗೂ ಸೂರಜ್‌ ಅವರ ಕಿರುನಾಟಕ ಪ್ರೇಕ್ಷಕರ ಮನರಂಜಿಸಿತು.

ADVERTISEMENT

ರವಿ ಬಸ್ರೂರ್‌ ಸಂಯೋಜನೆಯಲ್ಲಿ ಮೂಡಿಬಂದ ಕರಾವಳಿ ಮತ್ತು ಪಾಶ್ಚಾತ್ಯ ವಾದ್ಯಗಳ ‘ಧೀಂ ಕಿಟ್‌’ ಜುಗಲ್‌ ಬಂದಿ, ಸಂಗೀತದ ಹೊಸ ಅನುಭವ ನೀಡಿತು.

‘ಈ ಬಾರಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು’ ಎಂದು ಆಯೋಜಕರು ತಿಳಿಸಿದರು.

‘ಕಂಬಳ’ ಕರ್ನಾಟಕದ ಹಕ್ಕು

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್‌ಕುಮಾರ್‌, ‘ಇಂಥ ಉತ್ಸವಗಳು ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತವೆ’ ಎಂದು ಹೇಳಿದರು.
‘ಈಗ ಹೆಚ್ಚು ಚರ್ಚೆಗೆ ಒಳಗಾಗಿರುವ ಕಂಬಳ ಕ್ರೀಡೆಯು ಕರಾವಳಿ ಅಷ್ಟೇ ಅಲ್ಲ, ಇಡೀ ಕರ್ನಾಟಕದ ಹಕ್ಕು. ಜನಪ್ರತಿನಿಧಿಗಳು ಈ ಕ್ರೀಡೆಯ ಪರವಾಗಿದ್ದಾರೆ. ಅದರ ಮೇಲಿನ ನಿಷೇಧವನ್ನು ಹಿಂಪಡೆಯುವ ಸಂಬಂಧ ಪ್ರಧಾನ ಮಂತ್ರಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ’ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.