ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಭಾನುವಾರ ತೆರೆ ಬಿದ್ದಿತು.
ಮೇಳದ ಕೊನೆಯ ದಿನ ಜನಸಾಗರವೇ ಹರಿದು ಬಂತು. ಕಾಲಿಡಲು ಜಾಗ ಸಿಗದಷ್ಟು ಜನಸಂದಣಿ ಕಂಡುಬಂತು. ಕೃಷಿಕರು, ಕೃಷಿ ಆಸಕ್ತಿ ಉಳ್ಳವರು, ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು, –ಹೀಗೆ ಅನೇಕ ಮಂದಿ ಮೇಳಕ್ಕೆ ಬಂದಿದ್ದರು. ನಾಲ್ಕು ದಿನಗಳಲ್ಲಿ ಸುಮಾರು 6 ಲಕ್ಷ ಮಂದಿ ಭೇಟಿ ನೀಡಿದ್ದಾರೆ.
ಮೇಳದ ಎಲ್ಲ ಮಳಿಗೆಗಳಲ್ಲೂ ಜನರು ತುಂಬಿ ತುಳುಕುತ್ತಿದ್ದರು. ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಸಾಕಣೆ ಮತ್ತು ಮೀನು ಸಾಕಣೆ ಮಳಿಗೆಗಳ ವಿಭಾಗ, ಕೃಷಿ ಯಂತ್ರೋಪಕರಣಗಳ ವಿಭಾಗ, ಸಾವಯವ ಹಾಗೂ ಸಿರಿಧಾನ್ಯ ವಿಭಾಗಗಳಿಗೆ ಹೆಚ್ಚಿನ ಜನರು ಲಗ್ಗೆ ಇಟ್ಟರು. ಪಶುಸಂಗೋಪನೆ ಹಾಗೂ ಆಧುನಿಕ ಯಂತ್ರೋಪಕರಣಗಳ ಮಾಹಿತಿ ಪಡೆದರು.
ಜೈನ್ ಇರಿಗೇಷನ್ ಸಿಸ್ಟಮ್ ಕಂಪೆನಿಯವರು ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಕುರಿತು ನೀಡಿದ ಪ್ರಾತ್ಯಕ್ಷಿಕೆ ರೈತರ ಗಮನ ಸೆಳೆಯಿತು. ಹನಿ, ತುಂತುರು ನೀರಾವರಿ ಕುರಿತು ಮಾಹಿತಿ ಪಡೆದರು.
ಆಹಾರ ಮಳಿಗೆಗಳು: ಕೃಷಿ ವಿಶ್ವವಿದ್ಯಾಲಯದಿಂದ ₹50ಕ್ಕೆ ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುದ್ದೆ, ಕಾಳು ಸಾರು, ಅನ್ನ–ಸಾಂಬಾರು, ಮೊಸರನ್ನ, ಉಪ್ಪಿನಕಾಯಿ, ಸಿಹಿ ನೀಡಲಾಯಿತು. ಮುದ್ದೆ ಊಟಕ್ಕೆ ಜನರು ಮುಗಿಬಿದ್ದರು. ಸರದಿ ಸಾಲಿನಲ್ಲಿ ನಿಂತು ಊಟ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.