ಬೆಂಗಳೂರು: ‘ಜೆಡಿಎಸ್ ಪಕ್ಷವನ್ನು ಒಡೆದಿದ್ದು ಆಗಿದೆ. ಈಗ ಮನೆ ಒಡೆಯುವ ಕೆಲಸ ಮಾಡಬೇಡಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಜಮೀರ್ ಅಹಮದ್ ಖಾನ್ಗೆ ತಿರುಗೇಟು ನೀಡಿದರು.
ಕೆ.ಆರ್.ಪುರ ಐಟಿಐ ಮೈದಾನದಲ್ಲಿ ಶನಿವಾರ ಅಯೋಜಿಸಿದ್ದ ವಿಕಾಸಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪ್ರಜ್ವಲ್ ರೇವಣ್ಣ ಮೇಲೆ ನಿಮಗ್ಯಾಕೆ ಅಷ್ಟು ಮಮಕಾರ. ಇನ್ನಷ್ಟು ನೀಚತನಕ್ಕೆ ಇಳಿಯಬೇಡಿ. ನಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಗೊತ್ತಿದೆ’ ಎಂದು ಕಟುವಾಗಿ ಹೇಳಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬಡವರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಮಹಿಳೆಯರು ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವುದು ಅಸಾಧ್ಯವಾಗಿದೆ. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಕುಕ್ಕರ್, ಸೀರೆ ಹಂಚಲು ಬರುತ್ತಾರೆ. ಅಂತವರ ಬಗ್ಗೆ ಎಚ್ಚರದಿಂದ ಇರಬೇಕು’ ಎಂದರು.
ಜೆಡಿಎಸ್ ಅಭ್ಯರ್ಥಿ ಡಿ.ಎ. ಗೋಪಾಲ್ ಮಾತನಾಡಿ, ‘ರಾಜ್ಯ ಸರ್ಕಾರದ ₹7500 ಕೋಟಿ ಅನುದಾನವನ್ನು ಮೂವರು ಶಾಸಕರೇ ಹಂಚಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ. ಕ್ಷೇತ್ರಕ್ಕೆ ₹2,700 ಕೋಟಿ ಅನುದಾನ ಬಂದಿದೆ. ಆದರೆ, ಯಾವುದೇ ಕೆಲಸ ಆಗಿಲ್ಲ. ಶಾಸಕರು ಜನರ ಹಣ ಲೂಟಿ ಮಾಡಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.