ಬೆಂಗಳೂರು: ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಇತ್ತೀಚೆಗಷ್ಟೇ ಧರೆಗುರುಳಿದ್ದ 250 ವರ್ಷಗಳ ಹಳೆಯ ಮರಕ್ಕೆ ಕಲಾತ್ಮಕ ಸ್ಪರ್ಶ ಸಿಗಲಿದೆ.
ಹೈದರಾಲಿ ಮತ್ತು ಆತನ ಮಗ ಟಿಪ್ಪು ಸುಲ್ತಾನ್ ಇಲ್ಲಿ ಮಾವಿನ ಸಸಿಯನ್ನು ನೆಟ್ಟಿದ್ದರು ಎಂದು ಹೇಳಲಾಗುತ್ತದೆ. 15 ದಿನಗಳ ಹಿಂದಷ್ಟೇ ಮರ ಬಿದ್ದಿದೆ. ಇದೇ ವೇಳೆ ಲಾಲ್ಬಾಗ್ನಲ್ಲಿ ಇನ್ನೂ ಆರು ಹಳೆಯ ಮರಗಳು ಬಿದ್ದಿವೆ.
‘ಹೈದರಾಲಿ, ಟಿಪ್ಪು ಇಲ್ಲಿ ಮೂರು ಮಾವಿನ ಸಸಿಗಳನ್ನು ನೆಟ್ಟಿದ್ದರು. ಗಾಜಿನ ಮನೆ ಬಳಿ ಒಂದು ಮರ ಮಾತ್ರ ಉಳಿದಿದೆ’ ಎಂದು ತೋಟಗಾರಿಕಾ ಇಲಾಖೆಯ (ಲಾಲ್ಬಾಗ್) ಉಪನಿರ್ದೇಶಕ ಎಂ.ಆರ್.ಚಂದ್ರಶೇಖರ್ ತಿಳಿಸಿದರು.
‘ಟಿಪ್ಪು ಸುಲ್ತಾನ್ ನೆಟ್ಟ ಮರವಾಗಿರುವುದರಿಂದ ಇದನ್ನು ತೆರವುಗೊಳಿಸುವ ಬದಲು ಕಲಾತ್ಮಕವಾಗಿ ಪರಿವರ್ತಿಸುವ ಬಗ್ಗೆ ಚರ್ಚಿಸುತ್ತಿದ್ದೇವೆ. ಇದೇ ಮೊದಲ ಬಾರಿಗೆ ಲಾಲ್ಬಾಗ್ನಲ್ಲಿ ಇಂತಹ ಪ್ರಯತ್ನ ಮಾಡುತ್ತಿದ್ದೇವೆ. ಇದು ಇನ್ನೂ ಪ್ರಸ್ತಾವನೆ ಹಂತದಲ್ಲಿದೆ’ ಎಂದು ತೋಟಗಾರಿಕೆ ಇಲಾಖೆಯ ತಜ್ಞರ ಸಮಿತಿ ಸದಸ್ಯ ಅ.ನ.ಯಲ್ಲಪ್ಪ ರೆಡ್ಡಿ ತಿಳಿಸಿದರು.
‘ಈ ಮರಕ್ಕೆ ಎಷ್ಟು ವರ್ಷವಾಗಿದೆ ಎಂಬುದನ್ನು ತಿಳಿಯಲು ಅದರ ಮಾದರಿಗಳನ್ನು ಲಖನೌದಲ್ಲಿರುವ ಬೀರ್ಬಲ್ ಸಾಹ್ನಿ ಪಳಿಯುಳಿಕೆ ಸಸ್ಯ ಅಧ್ಯಯನ ಸಂಸ್ಥೆಗೆ ಕಳುಹಿಸಿದ್ದೇವೆ. ಬೆಂಗಳೂರಿನ ಮರವೊಂದರ ಅಧ್ಯಯನ ನಡೆಸುತ್ತಿರುವುದು ಇದೇ ಮೊದಲು. ಈ ಹಿಂದೆ ದೇವನಹಳ್ಳಿಯ ನಲ್ಲೂರಿನಲ್ಲಿದ್ದ ಪುರಾತನ ಹುಣಸೆ ಮರದ ಮಾದರಿಯನ್ನು ಅಧ್ಯಯನಕ್ಕೆ ಕಳುಹಿಸಲಾಗಿತ್ತು’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.