ADVERTISEMENT

‘ಪುಸ್ತಕ ಸಂಸ್ಕೃತಿ ಬೆಳೆಸುವ ಹೊಣೆ ಲೇಖಕರು, ಪ್ರಕಾಶಕರ ಮೇಲಿದೆ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2016, 19:57 IST
Last Updated 18 ಸೆಪ್ಟೆಂಬರ್ 2016, 19:57 IST

ಬೆಂಗಳೂರು:  ‘ಕನ್ನಡ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ, ವಿಸ್ತರಿಸುವ ಜವಾಬ್ದಾರಿ ಲೇಖಕರು ಹಾಗೂ ಪ್ರಕಾಶಕರ ಮೇಲಿದೆ’ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್‌  ಅವರು ಹೇಳಿದರು.

ಸ್ನೇಹ ಬುಕ್ ಹೌಸ್‌ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಪುಸ್ತಕ ಪ್ರಕಾಶನ ಕಾರ್ಯಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಲೇಖಕರು ಕೃತಿಗಳನ್ನು ಹೊರ ತರುವ ಮುನ್ನ ಓದುಗರ ಮನಸ್ಥಿತಿ, ಆಯ್ಕೆ, ಅಭಿರುಚಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಪುಸ್ತಕದ ಸ್ವರೂಪ, ವಿನ್ಯಾಸ, ಪರಿವಿಡಿ, ಅಧ್ಯಯನ ವಿಂಗಡಣೆ, ಶೀರ್ಷಿಕೆ ಮತ್ತು ತಾಂತ್ರಿಕತೆಯ ಬಗ್ಗೆ ಅರಿವಿರಬೇಕು’ ಎಂದು ಹೇಳಿದರು.

‘ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಶಿವರಾಮ ಕಾರಂತ ಅವರು ಬರವಣಿಗೆಯ ಜತೆಗೆ ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡುವ ಪರಿಣತಿ ಹೊಂದಿದ್ದರು. ಜತೆಗೆ ವ್ಯಾಕರಣ ಮತ್ತು ಭಾಷಾ ಬಳಕೆಯಲ್ಲೂ ಪ್ರೌಢಿಮೆ ಹೊಂದಿದ್ದರು’ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ರಾಜಾ ಶೈಲೇಶಚಂದ್ರ ಗುಪ್ತ ಅವರು ಮಾತನಾಡಿ, ‘ಪ್ರಕಾಶನ ಉದ್ಯಮ ವಾಗಿದ್ದು, ಮಾರಾಟದ ತಂತ್ರಗಳನ್ನು ಅಳವಡಿಸಿಕೊಂಡರೆ ಮಾತ್ರ ಯಶಸ್ವಿಯಾಗಬಹುದು. ಭವಿಷ್ಯವನ್ನು ರೂಪಿಸುವ ಹಾಗೂ ಸೃಜನೇತರ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಪ್ರಕಟಿಸಬೇಕು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತರಬೇತಿ ಸಂಚಾಲಕ ಕೆ. ರಾಜಕುಮಾರ್  ಅವರು ಮಾತನಾಡಿ, ‘ಕನ್ನಡ ಭಾಷೆ ಪ್ರಬಲಗೊಳ್ಳಬೇಕಾದರೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಕನ್ನಡ ಪುಸ್ತಕ ಪ್ರಕಾಶಕರಿಗೂ ಅನುಕೂಲವಾಗಲಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಪುಸ್ತಕ ಪ್ರಕಾಶನ ಕಮ್ಮಟಗಳನ್ನು  ಏರ್ಪಡಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.