ಬೆಂಗಳೂರು: ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಅವರ ಭಕ್ತರಿಂದ ತಮಗೆ ಪ್ರಾಣ ಬೆದರಿಕೆ ಇದೆ ಎಂದು ಆರೋಪಿಸಿರುವ ಉದ್ಯಮಿ ಹಾಗೂ ‘ಅಖಿಲ ಹವ್ಯಕ ಮಹಾಸಭಾ’ದ ಮಾಜಿ ಅಧ್ಯಕ್ಷ ಎಂ.ಎನ್. ಭಟ್ ಮದ್ಗುಣಿ, ತಮಗೆ ರಕ್ಷಣೆ ಒದಗಿಸುವಂತೆ ಮಲ್ಲೇಶ್ವರ ಠಾಣೆ ಪೊಲೀಸರನ್ನು ಕೋರಿದ್ದಾರೆ.
‘ಮಹಾಸಭಾದಿಂದ ಮಲ್ಲೇಶ್ವರದಲ್ಲಿ ಫೆ. 13, 14 ಹಾಗೂ 21ರಂದು 3 ದಿನ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಾನು ಸೇರಿದಂತೆ ಮಹಾಸಭಾದ ಕೆಲವರು ಭಾಗವಹಿಸಬಾರದು ಎಂದು ಸ್ವಾಮೀಜಿ ಮತ್ತು ಅವರ ಭಕ್ತರು ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ಮಠದ ಭಕ್ತರಿಂದ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಬೆದರಿಸುತ್ತಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಸ್ವಾಮೀಜಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ನಾನು ಸಾಕ್ಷಿದಾರ ಕೂಡ ಆಗಿದ್ದೇನೆ. ಹಾಗಾಗಿ, ನನಗೆ ವೈಯಕ್ತಿಕ ರಕ್ಷಣೆ ಜತೆಗೆ, 3 ದಿನ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಅವರು ಕೋರಿದ್ದಾರೆ ಎಂದು ಮಲ್ಲೇಶ್ವರ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.