ADVERTISEMENT

ಪ್ರತ್ಯೇಕ ಅಪಘಾತ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 20:07 IST
Last Updated 23 ಮಾರ್ಚ್ 2018, 20:07 IST
ಅಪಘಾತದಿಂದಾಗಿ ಜಖಂಗೊಂಡಿರುವ ಕಾರು
ಅಪಘಾತದಿಂದಾಗಿ ಜಖಂಗೊಂಡಿರುವ ಕಾರು   

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಹಾಗೂ ಹುಳಿಮಾವು ಸಂಚಾರ ಠಾಣೆಗಳಲ್ಲಿ ಶುಕ್ರವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ರಸ್ತೆ ವಿಭಜಕಕ್ಕೆ ಕಾರು ಗುದ್ದಿದ್ದರಿಂದ ಚಾಲಕ ರಾಜೇಶ್ ಜಾಕಬ್ (31) ಮೃತಪಟ್ಟಿದ್ದಾರೆ.

ಐಬಿಎಂ ಕಂಪನಿ ಉದ್ಯೋಗಿಯಾದ ಅವರು ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ ಪತ್ನಿ ಜತೆ ವಾಸವಿದ್ದರು. ಪತ್ನಿಯನ್ನು ಕರೆದುಕೊಂಡು ಬರಲು ಸಂಜೆ 4.30ರ ಸುಮಾರಿಗೆ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುತ್ತಿದ್ದರು.

ADVERTISEMENT

ಮೇಲ್ಸೇತುವೆ ಮೇಲೆ ವೇಗವಾಗಿ ಕಾರು ಚಲಾಯಿಸಿದ್ದಾಗ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದ್ದಾರೆ. ಕೂಡಲೇ ಅವರನ್ನು ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ತಿಳಿಸಿದರು.‌

ಮೇಲ್ಸೇತುವೆಯಿಂದ ಬಿದ್ದು ಸಾವು: ಬೈಕ್‌ನಲ್ಲಿ ಹೋ­ಗು­ತ್ತಿದ್ದ ವೇಳೆ ಸಂಭವಿಸಿದ ಅಪ­ಘಾತದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಿಂದ ಬಿದ್ದು ಶರತ್ ಕುಮಾರ್ (30) ಎಂಬುವರು ಮೃತಪಟ್ಟಿದ್ದಾರೆ.

ಪರಪ್ಪನ ಅಗ್ರಹಾರ ಬಳಿಯ ಮಂಜುನಾಥನಗರದಲ್ಲಿ ಕುಟುಂಬಸ್ಥರ ಜತೆಗೆ ವಾಸವಿದ್ದ ಅವರು ಇನ್ಫೊಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಕೆಲಸದ ನಿಮಿತ್ತ ಬೈಕ್‌ನಲ್ಲಿ ಹೊರಗಡೆ ಹೋಗಿದ್ದ ಅವರು ಮೇಲ್ಸೇತುವೆಯಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ ಬೈಕ್‌ ಅಡ್ಡಾದಿಡ್ಡಿಯಾಗಿ ಸಾಗಿ ವಿಭಜಕಕ್ಕೆ ಡಿಕ್ಕಿಯಾಗಿದೆ. ಆಗ ಅವರು ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.