ADVERTISEMENT

ಬಲಿಜ ಸಮಾವೇಶ 28ಕ್ಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:46 IST
Last Updated 24 ಮೇ 2017, 19:46 IST
ಬೆಂಗಳೂರು: ಕರ್ನಾಟಕ ಬಲಿಜ ಮಹಾಸಭಾ ನೇತೃತ್ವದಲ್ಲಿ ಮೇ 28ರಂದು ಅರಮನೆ ಮೈದಾನದಲ್ಲಿ ಬಲಿಜ ಸಮಾಜದ ಬೃಹತ್‌  ಸಮಾವೇಶ ಏರ್ಪಡಿಸಲಾಗಿದೆ.
 
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ  ಮಹಾಸಭಾದ ಅಧ್ಯಕ್ಷರಾಗಿರುವ ಸಂಸದ ಪಿ.ಸಿ.ಮೋಹನ್‌, ‘ಬಲಿಜ ಸಮಾಜದವರು ಈ ಹಿಂದೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿ ಸವಲತ್ತು ಪಡೆಯುತ್ತಿದ್ದರು.
 
1994ರಲ್ಲಿ   ಯಾವುದೇ ಕಾರಣ ನೀಡದೆಯೇ  ಸಮಾಜವನ್ನು ಪ್ರವರ್ಗ 3ಎಗೆ ಸೇರಿಸಲಾಯಿತು. ಸಾಕಷ್ಟು ಹೋರಾಟದ ಬಳಿಕ 2011ರಲ್ಲಿ ಸಮಾಜಕ್ಕೆ 2ಎ ಪ್ರವರ್ಗದಡಿ ಶೈಕ್ಷಣಿಕ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, 2 ಎ  ಪ್ರವರ್ಗದಡಿ ರಾಜಕೀಯ ಹಾಗೂ ಔದ್ಯೋಗಿಕ ಮೀಸಲಾತಿ ಸಿಗುತ್ತಿಲ್ಲ. ಈ ಸವಲತ್ತನ್ನು ಮತ್ತೆ ಪಡೆಯುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದರು.
 
‘ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಬಲಿಜರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಬಳೆ, ಹೂವು, ಅರಶಿನ– ಕುಂಕುಮ, ಎಲೆ ಅಡಿಕೆಗಳನ್ನು ಮಾರಾಟ ಮಾಡುವುದು ಈ ಸಮಾಜದ ಕುಲಕಸುಬು. ಈಗ  ಕುಲಕಸುಬು ನಶಿಸುತ್ತಿದೆ. ಹಾಗಾಗಿ ಔದ್ಯೋಗಿಕ ಮೀಸಲಾತಿಯ ಅಗತ್ಯವಿದೆ’ ಎಂದರು.
 
‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಗೃಹಸಚಿವ ಜಿ.ಪರಮೇಶ್ವರ್‌ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
 
ವಿಧಾನ ಪರಿಷತ್‌ ಸದಸ್ಯ ಸಿ.ಆರ್‌.ಮನೋಹರ್‌, ‘35 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಸಂಖ್ಯೆಯಲ್ಲಿ  ಬಲಿಜ ಸಮಾಜದವರಿದ್ದಾರೆ. ಬೆಂಗಳೂರು ನಗರದಲ್ಲೂ ನಮ್ಮವರ ಸಂಖ್ಯೆ ಹೆಚ್ಚು ಇದೆ.   ರಾಜಕೀಯ ಮೀಸಲಾತಿಗೆ ಪ್ರಬಲ ಜಾತಿಗಳ  ಪೈಪೋಟಿ ಎದುರಿಸಬೇಕಾಗಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.