ADVERTISEMENT

ಬಾಲಕನ ಮರ್ಮಾಂಗ ಕತ್ತರಿಸಿ ಚಿತ್ರಹಿಂಸೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 19:49 IST
Last Updated 25 ಸೆಪ್ಟೆಂಬರ್ 2016, 19:49 IST

ಬೆಂಗಳೂರು: ಭಾರತೀನಗರದ ರಾಜೇಶ್‌ (17) ಎಂಬಾತನನ್ನು ಅಪಹರಿಸಿದ್ದ ತೃತೀಯ ಲಿಂಗಿಗಳ ಗುಂಪು ಆತನ ಮರ್ಮಾಂಗ ಕತ್ತರಿಸಿ ಚಿತ್ರಹಿಂಸೆ ನೀಡಿದ ಕುರಿತು ಪುಲಿಕೇಶಿನಗರ ಠಾಣೆಯಲ್ಲಿ ಭಾನುವಾರ ದೂರ ದಾಖಲಾಗಿದೆ.

‘ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರಾಜೇಶ್‌, ತಾಯಿಯೊಂದಿಗೆ ವಾಸವಿದ್ದ.  ಸ್ನೇಹಿತನೊಬ್ಬನ ಮೂಲಕ ಆತನಿಗೆ ತೃತೀಯ ಲಿಂಗಿಯೊಬ್ಬರ ಪರಿಚಯವಾಗಿತ್ತು. ಕೆಲದಿನ ರಾಜೇಶ್‌ನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ತೃತೀಯ ಲಿಂಗಿಯು ತನ್ನ ಸಂಗಡಿಗರ ಗುಂಪಿನೊಂದಿಗೆ ಇತ್ತೀಚೆಗೆ  ಆತನನ್ನು ಅಪಹರಿಸಿತ್ತು. ರಾಜೇಶ್‌ ಮನೆಗೆ ಬಾರದಿದ್ದಾಗ ತಾಯಿಯು ಮಗ ನಾಪತ್ತೆಯಾದ ಬಗ್ಗೆ ಠಾಣೆಗೆ ದೂರು ನೀಡಿದ್ದರು’ ಎಂದು  ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

‘ರಾಜೇಶ್‌ನನ್ನು ಹನ್ನೊಂದು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿಕೊಂಡಿದ್ದ ತೃತೀಯ ಲಿಂಗಿಗಳ ತಂಡವು ಆತನ ಮರ್ಮಾಂಗ ಕತ್ತರಿಸಿತ್ತು. ಬಳಿಕ ಮರ್ಮಾಂಗ ಜಾಗಕ್ಕೆ ಬಿಸಿ ನೀರು ಹಾಕಿ ಚಿತ್ರಹಿಂಸೆ ನೀಡುತ್ತಿತ್ತು. ಈ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ  ತೃತೀಯ ಲಿಂಗಿಯೊಬ್ಬರ ಮನೆಯಲ್ಲಿ ಕೂಡಿಹಾಕಿದ್ದ ರಾಜೇಶ್‌ನನ್ನು ರಕ್ಷಿಸಿ  ಆಸ್ಪತ್ರೆಗೆ ದಾಖಲಿಸಲಾಗಿದೆ’.

‘ಆರಂಭದಲ್ಲಿ ಕಾಣೆ ದೂರು ನೀಡಿದ್ದ ತಾಯಿಯು ಈಗ ಆನಂದಿ ಹಾಗೂ ಅವರ ಜತೆಗಿರುವರು ರಾಜೇಶ್‌ನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮತ್ತೊಂದು ದೂರು ಕೊಟ್ಟಿದ್ದಾರೆ.  ಸದ್ಯ ಆ ಆರೋಪಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.