ಬೆಂಗಳೂರು: ವಿಇಟಿ ಕಾಲೇಜು ಹಾಗೂ ಮೆಟ್ರೊ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿದ ಜೆ.ಪಿ.ನಗರ ಪೊಲೀಸರು, ರಸ್ತೆ ಬದಿ ನಿಂತು ಮಹಿಳೆಯರನ್ನು ಚುಡಾಯಿಸುತ್ತಿದ್ದ ಇಬ್ಬರು ಪುಂಡರನ್ನು ಬಂಧಿಸಿದ್ದಾರೆ.
‘ಪ್ರತ್ಯೇಕ ಪ್ರಕರಣಗಳಲ್ಲಿ ರಾಮನಗರ ಜಿಲ್ಲೆಯ ಜೋಗಮಾನಹೊಸಹಳ್ಳಿಯ ಅಭಿಷೇಕ್ ಗೌಡ (21) ಹಾಗೂ ಜೆ.ಪಿ.ನಗರ ಎರಡನೇ ಹಂತದ ಅರವಿಂದ್ (20) ಎಂಬುವರನ್ನು ಬಂಧಿಸಿದ್ದೇವೆ. ಅಶ್ಲೀಲ ಪದಬಳಕೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ ತಂದ (ಐಪಿಸಿ 509) ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಜೆ.ಪಿ.ನಗರ ಮೆಟ್ರೊ ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ್ದ ಅಭಿಷೇಕ್, ‘ಲೇ ನಿಂತ್ಕೋಳೆ. ನೋಡೋಕೆ ಚೆನ್ನಾಗಿದ್ದೀಯಾ. ನನ್ನ ಜತೆ ಬಾ’ ಎಂದು ಕರೆದಿದ್ದ. ಆ ಮಾತುಗಳಿಂದ ಮುಜುಗರಕ್ಕೀಡಾದ ಸಂತ್ರಸ್ತೆ, ಅಳುತ್ತಾ ಅಲ್ಲಿಂದ ಹೊರಟಿದ್ದರು. ಇದೇ ವೇಳೆ ಆ ಮಾರ್ಗವಾಗಿ ಬಂದ ಗಸ್ತು ಸಿಬ್ಬಂದಿಯು ಸಂತ್ರಸ್ತೆಯನ್ನು ವಿಚಾರಿಸಿದಾಗ ಆರೋಪಿಯ ಪುಂಡಾಟಿಕೆಯನ್ನು ವಿವರಿಸಿದ್ದರು. ಸಿಬ್ಬಂದಿ ಆತನನ್ನು ವಶಕ್ಕೆ ಪಡೆದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಯುವತಿ ದೂರು ಕೊಡಲು ನಿರಾಕರಿಸಿದ್ದರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ. ರಾಮನಗರದ ಅಭಿಷೇಕ್, ನಗರದಲ್ಲಿ ಟೆಂಪೊ ಓಡಿಸಿಕೊಂಡು ಆರು ತಿಂಗಳಿನಿಂದ ಸಾರಕ್ಕಿಯಲ್ಲಿ ನೆಲೆಸಿದ್ದಾನೆ’ ಎಂದು ಮಾಹಿತಿ ನೀಡಿದರು.
ಇನ್ನೊಬ್ಬ ಪುಂಡ: ‘ವಿಇಟಿ ಕಾಲೇಜು ಬಳಿ ನಡೆದ ಮತ್ತೊಂದು ಪ್ರಕರಣದಲ್ಲಿ 30 ವರ್ಷದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿದ್ದ ಅರವಿಂದ್, ‘ನನ್ನ ಜತೆ ಬಾ’ ಎಂದು ಕರೆದಿದ್ದ. ಅಲ್ಲದೆ, ಅವರನ್ನು ಉದ್ದೇಶಿಸಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದ. ಈ ಬಗ್ಗೆ ಸ್ಥಳೀಯರೊಬ್ಬರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಸಿಬ್ಬಂದಿ, ಆತನನ್ನೂ ವಶಕ್ಕೆ ಪಡೆದರು’ ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.