ಬೆಂಗಳೂರು: ಪ್ರತಿ ತಿಂಗಳ ಎರಡನೇ ಭಾನುವಾರ ಸಂಚಾರ ವಿರಳ ದಿನ ( less traffic day) ಆಚರಿಸಲು ನಿರ್ಧಾರಿಸಿರುವುದಾಗಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
‘72 ಲಕ್ಷ ವಾಹನಗಳ ಪೈಕಿ 65 ಲಕ್ಷ ವಾಹನ ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳಲಿವೆ. ಇದಕ್ಕೆ ಕಾನೂನು ಮಾಡುವುದಿಲ್ಲ, ಜನಾಂದೋಲನ ಮಾಡುತ್ತೇವೆ. ಅಂದು ಬಸ್ ಪಾಸ್ ದರ ಮತ್ತು ಮೆಟ್ರೊ ಪ್ರಯಾಣ ದರ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆದಿದೆ’ ಎಂದರು.
ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸ್ವಂತ ವಾಹನಗಳ ಬಳಕೆಯನ್ನು ವಾರಕ್ಕೆ ಒಮ್ಮೆಯಾದರೂ ಸ್ಥಗಿತಗೊಳಿಸಬೇಕು, ಸಾಮೂಹಿಕ ಸಾರಿಗೆ ವ್ಯವಸ್ಥೆ ಬಳಸುವಂತೆ ಭವಿಷ್ಯದಲ್ಲಿ ಬೆಂಗಳೂರು ಉಳಿವಿಗಾಗಿ ವಿರಳ ಸಂಚಾರ ದಿನ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.
ತಿಂಗಳ ಎರಡನೇ ಭಾನುವಾರ ಈ ಅಭಿಯಾನ ನಿಗದಿಯಾಗಿದ್ದು, ಅತಿ ಅನಿವಾರ್ಯ ಸಮಯದಲ್ಲಿ ಮಾತ್ರ ಸ್ವಂತ ವಾಹನ ಬಳಕೆ ಮಾಡುವಂತೆ ಕೋರಲಾಗಿದೆ.
ಈ ಅಭಿಯಾನದಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣದ ಜತೆಗೆ ಇಂಧನ ಉಳಿತಾಯವೂ ಆಗಲಿದೆ. ಅಭಿಯಾನದ ದಿನ ಆಟೋ, ಬಿಎಂಟಿಸಿ ಬಸ್, ಆ್ಯಪ್ ಆಧಾರಿತ ವಾಹನ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಅಭಿಯಾನದ ಸೂಚನಾ ಪ್ರತಿಯಲ್ಲಿ ಪ್ರಕಟಿಸಲಾಗಿದೆ.
2018ರ ಫೆಬ್ರುವರಿಯಿಂದ ಈ ಅಭಿಯಾನ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.