ADVERTISEMENT

ಬೈಕ್ ಅಪಘಾತ: ಟೆಕ್ಕಿ ಸಾವು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:45 IST
Last Updated 27 ನವೆಂಬರ್ 2014, 19:45 IST

ಬೆಂಗಳೂರು: ನಾಗವಾರ ಮೇಲ್ಸೇ­ತುವೆಯಲ್ಲಿ ಬುಧವಾರ ರಾತ್ರಿ ಅಪ­ರಿಚಿತ ವಾಹನ ಡಿಕ್ಕಿ ಹೊಡೆದು ಸಾಫ್ಟ್‌ವೇರ್‌ ಎಂಜಿನಿಯರ್ ಅನೂಪ್ ಸುಂದರ್ ರಮಣಿ (26) ಎಂಬುವರು ಮೃತಪಟ್ಟಿದ್ದಾರೆ.

ಕೊಡಿಗೇಹಳ್ಳಿ ನಿವಾಸಿಯಾದ ಅನೂಪ್, ವೈಟ್‌ಫೀಲ್ಡ್‌ನಲ್ಲಿರುವ ಸಾಫ್ಟ್‌ ವೇರ್‌ ಕಂಪೆನಿಯಲ್ಲಿ ಉದ್ಯೋಗಿ­ಯಾಗಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 12 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಬೈಕ್‌ಗೆ ಡಿಕ್ಕಿ ಹೊಡೆದಿರುವ ಅಪರಿ­ಚಿತ ವಾಹನ, ನಂತರ ಅವರ ಮೇಲೆ ಹರಿದಿದೆ. ಇದರಿಂದ ಅನೂಪ್ ಸ್ಥಳ­ದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾ­ಗುತ್ತಿದೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣ: ಕುಮಾರಸ್ವಾಮಿ ಲೇಔಟ್ ಸಮೀಪದ ಷಣ್ಮುಗ ದೇವ ಸ್ಥಾನದ ಬಳಿ ಬುಧವಾರ ರಾತ್ರಿ ಸಂಭ­ವಿಸಿದ ಮತ್ತೊಂದು ಅಪಘಾತದಲ್ಲಿ ಸುಬ್ರ­ಹ್ಮಣಿ (50) ಎಂಬುವರು ಸಾವನ್ನಪ್ಪಿದ್ದಾರೆ. ತಲಘಟ್ಟಪುರ ನಿವಾಸಿಯಾದ ಸುಬ್ರಹ್ಮಣಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಕುಡಿ­ಯುವ ನೀರು ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದ ಅವರು, ರಾತ್ರಿ 12 ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಕನಕಪುರಕ್ಕೆ ಹೋಗುತ್ತಿದ್ದರು.

ಈ ವೇಳೆ ತಿರುವು ಪಡೆಯುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡ ಅವರು, ರಸ್ತೆ ಬದಿಯ ಬಂಡೆಗೆ ಬೈಕ್‌ ಗುದ್ದಿಸಿದರು. ಕೆಳಗೆ ಬಿದ್ದಾಗ ಅವರ ತಲೆಗೆ ಕಲ್ಲು ತಾಗಿದ್ದರಿಂದ ತೀವ್ರ ರಕ್ತ ಸ್ರಾವ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.