ADVERTISEMENT

‘ಭಾರತಕ್ಕೆ ಹಿಂಸೆ ಬಂದಿದ್ದೇ ಮುಸ್ಲಿಮರಿಂದ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:58 IST
Last Updated 21 ಜನವರಿ 2017, 19:58 IST
ಡಾ.ಎಂ. ಚಿದಾನಂದಮೂರ್ತಿ ಹಾಗೂ ವಕೀಲ ಅಮೃತೇಶ್‌ ಮಾತುಕತೆ ನಡೆಸಿದರು. ಉಮೇಶ್ ಶರ್ಮ ಗುರೂಜಿ, ವಕೀಲ ದೊರೈರಾಜು, ಸತಾತನ ಸಂಸ್ಥೆಯ ಸತ್ಯವಾನ್ ಕದಮ್‌ ಇದ್ದಾರೆ   –ಪ್ರಜಾವಾಣಿ ಚಿತ್ರ
ಡಾ.ಎಂ. ಚಿದಾನಂದಮೂರ್ತಿ ಹಾಗೂ ವಕೀಲ ಅಮೃತೇಶ್‌ ಮಾತುಕತೆ ನಡೆಸಿದರು. ಉಮೇಶ್ ಶರ್ಮ ಗುರೂಜಿ, ವಕೀಲ ದೊರೈರಾಜು, ಸತಾತನ ಸಂಸ್ಥೆಯ ಸತ್ಯವಾನ್ ಕದಮ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಾಂತಿಪ್ರಿಯರ ನಾಡಾಗಿರುವ ಭಾರತಕ್ಕೆ ಹಿಂಸೆ ಬಂದಿದ್ದೇ ಮುಸ್ಲಿಮರಿಂದ’ ಎಂದು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಕಿಡಿಕಾರಿದರು.

ಹಿಂದೂ ಜನಜಾಗೃತಿ ಸಮಿತಿಯ ಆಶ್ರಯದಲ್ಲಿ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ನಡೆದ ‘ಪ್ರಾಂತೀಯ ಹಿಂದೂ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೂಗಳನ್ನು ಈಗ ಹೀನಾಯವಾಗಿ ಕಾಣಲಾಗುತ್ತಿದೆ. ಹಿಂದೂ ಧರ್ಮವನ್ನು ಟೀಕಿಸುವುದೇ ಬುದ್ಧಿಜೀವಿಗಳ ಕೆಲಸವಾಗಿದೆ. ಅವರು ಮೂರ್ಖಜೀವಿಗಳು. ಕ್ರೈಸ್ತರು ಮತಾಂತರ ಮಾಡುತ್ತಿದ್ದಾರೆ. ಮುಸ್ಲಿಮರು ಹಿಂಸೆಯಲ್ಲಿ ತೊಡಗಿದ್ದಾರೆ.  ಇಂತಹ ಚಟುವಟಿಕೆಗಳನ್ನು ತಡೆಯಲು ಹಾಗೂ ನಮ್ಮ ಧರ್ಮವನ್ನು ರಕ್ಷಿಸಲು ಹಿಂದೂಗಳು ಒಗ್ಗಟ್ಟಾಗಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಬೆಂಗಳೂರಿನ ಟಿಪ್ಪು ಅರಮನೆ ಪಕ್ಕದ ಅನೇಕ ದೇವಸ್ಥಾನಗಳನ್ನು ಭಗ್ನಗೊಳಿಸಲಾಗಿದೆ. ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಟಿಪ್ಪು ಮತಾಂಧ. ಹಿಂದೂ ಧರ್ಮದ ಜನರ ಮೇಲೆ ಅಪಾರ ದ್ವೇಷ ಹೊಂದಿದ್ದ. ಹಿಂದೂಗಳನ್ನು ಮತಾಂತರ ಮಾಡಲು ಹಾಗೂ ಕೊಲ್ಲಲು ಸೂಚನೆ ನೀಡಿದ್ದ’ ಎಂದರು.

‘ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ ಇದೆ. ಇದನ್ನು ಎಲ್ಲ ಮಠಾಧಿಪತಿಗಳು ಖಂಡಿಸಿದ್ದಾರೆ. ಅಸ್ಪೃಶ್ಯತೆ ವಿರುದ್ಧ ನಾವೆಲ್ಲ ಧ್ವನಿ ಎತ್ತಬೇಕು’ ಎಂದು ಅವರು ಕಿವಿಮಾತು ಹೇಳಿದರು.

‘ಬಹಳ ಜನರಿಗೆ ವೇದಗಳ ಬಗ್ಗೆ ಗೊತ್ತಿಲ್ಲ. ಅವುಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ವೇದಗಳಲ್ಲಿ ಎಲ್ಲಿಯೂ ಕೂಡಾ ಜಾತಿಭೇದ, ಲಿಂಗಭೇದ, ವರ್ಣಭೇದ ಇಲ್ಲ. ಆದರೆ, ಅವುಗಳಲ್ಲಿ 4 ವರ್ಣಗಳ ಉಲ್ಲೇಖ ಇದೆ ಅಷ್ಟೇ. ಜಾತಿ  ಹುಟ್ಟಿನಿಂದ ಬಂದಿರುವುದು ಅಲ್ಲ. ಅದು  ವೃತ್ತಿ ಮನೋಧರ್ಮಕ್ಕೆ ಸಂಬಂಧಿಸಿದ್ದು’ ಎಂದು ಅವರು ವ್ಯಾಖ್ಯಾನಿಸಿದರು.

ಅಧಿವೇಶನದಲ್ಲಿ ದೇವಸ್ಥಾನಗಳ ರಕ್ಷಣೆ, ಮತಾಂತರಕ್ಕೆ ತಡೆ, ಗೋರಕ್ಷಣೆ,  ಮಹಿಳಾ ಸುರಕ್ಷೆ, ಹಿಂದೂ ಮುಖಂಡರ ಕೊಲೆ, ಸಂಸ್ಕೃತಿ ರಕ್ಷಣೆ ವಿಷಯಗಳ ಬಗ್ಗೆ ವಿಷಯ ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.