ADVERTISEMENT

ಭೈರಪ್ಪನವರ ಬದ್ಧತೆ ಮೆಚ್ಚುತ್ತೇನೆ : ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:49 IST
Last Updated 14 ಸೆಪ್ಟೆಂಬರ್ 2014, 19:49 IST
ನಗರದ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರಲ್ಲಿ ಡಾ.ನರಹಳ್ಳಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಟಿ.ಯಲ್ಲಪ್ಪ ಅವರಿಗೆ ಹಿರಿಯ ವಿಮರ್ಶಕ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರು (ಎಡದಿಂದ ಮೊದಲನೆಯವರು) ‘ನರಹಳ್ಳಿ’ ಪ್ರಶಸ್ತಿ ಪ್ರದಾನ ಮಾಡಿದರು.  ಪ್ರತಿಷ್ಠಾನದ ಕಾರ್ಯದರ್ಶಿ ಆನಂದರಾಮ ಉಪಾಧ್ಯ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಪ್ರತಿಷ್ಠಾನದ ಅಧ್ಯಕ್ಷ  ಡಾ. ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಉಪಾಧ್ಯಕ್ಷ ಲಕ್ಷ್ಮಣ ಕೊಡಸೆ ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ನಗರದ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರಲ್ಲಿ ಡಾ.ನರಹಳ್ಳಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಟಿ.ಯಲ್ಲಪ್ಪ ಅವರಿಗೆ ಹಿರಿಯ ವಿಮರ್ಶಕ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರು (ಎಡದಿಂದ ಮೊದಲನೆಯವರು) ‘ನರಹಳ್ಳಿ’ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಆನಂದರಾಮ ಉಪಾಧ್ಯ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಉಪಾಧ್ಯಕ್ಷ ಲಕ್ಷ್ಮಣ ಕೊಡಸೆ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸೈದ್ಧಾಂತಿಕ ವಿಚಾರಧಾರೆ­ಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ­ವಿ­ದ್ದರೂ, ನೇರನುಡಿ ಮತ್ತು ಆಡುವ ಮಾತಿಗೆ ಬದ್ಧವಾಗಿರುವ ಪಾರದರ್ಶಕ ಗುಣದಿಂದಾಗಿ ಸಾಹಿತಿ ಎಸ್.ಎಲ್. ಭೈರಪ್ಪ ಅವರನ್ನು ಮೆಚ್ಚುತ್ತೇನೆ’ ಎಂದು  ಹಿರಿಯ ವಿಮರ್ಶಕ ಪ್ರೊ.ಎಸ್‌.ಜಿ.­ಸಿದ್ಧರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ಡಾ.ನರ­ಹಳ್ಳಿ ಪ್ರತಿಷ್ಠಾನ ಮತ್ತು ಕನ್ನಡ ಜನಶಕ್ತಿ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಟಿ.ಯಲ್ಲಪ್ಪ ಅವರಿಗೆ ‘ನರಹಳ್ಳಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಸಾಹಿತಿಗಳಲ್ಲಿ ನುಡಿದಂತೆ ನಡೆಯದ ಇಬ್ಬಂದಿತನ ಹೆಚ್ಚಾಗುತ್ತಿದೆ. ಆದ್ದರಿಂದ, ಟೀಕೆಗಳು ಕೇಳಿ ಬರುತ್ತಿವೆ. ಬರೆಯುವವರ ಬದುಕು, ಬರಹ ಮಾತ್ರವಲ್ಲ, ಆಡುವ ಮಾತೂ ಪಾರದರ್ಶಕವಾಗಿರಬೇಕು. ಸಾಹಿತಿಯಾದವನಲ್ಲಿ ವೇದಿಕೆ ಮೇಲೆ ತನಗನಿಸಿದ್ದನ್ನು ನೇರವಾಗಿ ಹೇಳುವ ಧೈರ್ಯವಿರಬೇಕು’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ‘ನಿಜವಾದ ಕವಿಯಲ್ಲಿ ಗಾಯವನ್ನು ಕೂಡ ಗಾಯನವನ್ನಾಗಿ ಪರಿವರ್ತಿಸುವ ಶಕ್ತಿ ಇರುತ್ತದೆ. ಈ ಗುಣ ಯಲ್ಲಪ್ಪ ಅವರ ಕಾವ್ಯದಲ್ಲಿ ಕಾಣಬಹುದು’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಕವಿ ಟಿ. ಯಲ್ಲಪ್ಪ ಮಾತನಾಡಿ, ‘ದಲಿತ ಸಮುದಾಯ­ವನ್ನು ಶೋಷಣೆ ಮಾಡಿದವರ ವಿರುದ್ಧ ಸಮರ ಸಾರದ ನಾನು, ಅವರೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ಕವಿತೆಗಳನ್ನು ರಚನೆ ಮಾಡಲು ಆರಂಭಿಸಿದೆ. ನನ್ನ ಕಾವ್ಯ ಕೃಷಿಯ ಆರಂಭದಿಂದಲೂ ಮೇಲ್ವರ್ಗದ  ಅನೇಕರು ಬೆನ್ನು ತಟ್ಟುತ್ತಲೇ ಬಂದಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.