ADVERTISEMENT

ಮಚ್ಚಿನಿಂದ ಹೊಡೆದು ಪತ್ನಿ ಕೊಲೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 19:32 IST
Last Updated 22 ಜುಲೈ 2016, 19:32 IST

ಬೆಂಗಳೂರು: ಸುಂಕದಕಟ್ಟೆ ಸಮೀಪದ ಶ್ರೀನಿವಾಸ ನಗರ ಬಳಿ ಗುರುವಾರ ರಾತ್ರಿ ಪಲ್ಲವಿ (24) ಎಂಬುವರನ್ನು  ಅವರ ಪತಿಯೇ ಕೊಲೆ ಮಾಡಿದ್ದಾನೆ.

‘ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ. ಘಟನೆ ಬಳಿಕ ಸೋಮನಹಳ್ಳಿ ಜಂಕ್ಷನ್‌ ಬಳಿ ಇದ್ದ ಪತಿ ಪುನೀತ್‌ಕುಮಾರ್‌ನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದರು. 


‘ಆಟೊ ಚಾಲಕನಾಗಿರುವ ಪುನೀತ್‌ಕುಮಾರ್ ಹಾಗೂ ಪಲ್ಲವಿ, ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಗಂಡು ಮಗು ಇದೆ. ಆರು ತಿಂಗಳ ಹಿಂದಷ್ಟೇ ದಂಪತಿ ನಡುವೆ ಜಗಳ ಆರಂಭವಾಗಿತ್ತು. ಅದರಿಂದ ಪುನೀತ್‌ಕುಮಾರ್‌,  ಪತ್ನಿಗೆ  ವಿಚ್ಛೇದನ ನೋಟಿಸ್‌ ಕೊಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ವಿಚಾರಣೆ ನಡೆಯುತ್ತಿದೆ. ಸಂಧಾನ ಇದ್ದಿದ್ದರಿಂದ ಗುರುವಾರ ಬೆಳಿಗ್ಗೆ ಪಲ್ಲವಿ ಹಾಗೂ ಪುನೀತ್‌,  ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಪತ್ನಿಯೊಂದಿಗೆ ಬಾಳುವುದಾಗಿ ಪುನೀತ್‌  ಇಚ್ಛೆ ವ್ಯಕ್ತಪಡಿಸಿದ್ದರಿಂದ  ನ್ಯಾಯಾಲಯವು ಅವಕಾಶ ನೀಡಿತ್ತು’ ಎಂದು ವಿವರಿಸಿದರು.

‘ಸಂಧಾನ ಬಳಿಕ ಪುನೀತ್‌ಗೆ ಕರೆ ಮಾಡಿದ್ದ ಪಲ್ಲವಿ, ಮನೆಗೆ ಬರುವುದಾಗಿ ಹೇಳಿದ್ದರು. ಅದರಂತೆ ರಾತ್ರಿ 9ರ ಸುಮಾರಿಗೆ ತಾಯಿ ಹಾಗೂ ಮಗನ ಜತೆಗೆ ಮನೆಗೆ ಬಂದಿದ್ದರು. ಈ ವೇಳೆ  ಜಗಳ ತೆಗೆದ ಪುನೀತ್‌, ಪಲ್ಲವಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಜಗಳ ನಡೆಯುತ್ತಿದ್ದ ವೇಳೆಯಲ್ಲಿ ತಾಯಿ ಸ್ಥಳೀಯರನ್ನು ಕರೆಯಲು ಮನೆಯಿಂದ ಹೊರಗಡೆ ಬಂದಿದ್ದರು. ಸ್ಥಳೀಯರು ಬರುವಷ್ಟರಲ್ಲಿ ಪತ್ನಿಯನ್ನು ಹತ್ಯೆಗೈದ ಪುನೀತ್‌, ಸೋಮನಹಳ್ಳಿ ಜಂಕ್ಷನ್‌ನತ್ತ ಹೋಗುತ್ತಿದ್ದ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT