ADVERTISEMENT

ಮನಸೆಳೆದ ಕರಕುಶಲ ವಸ್ತುಗಳು

‘ಆನಂದಂ’ ಹಿರಿಯ ನಾಗರಿಕರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2014, 19:30 IST
Last Updated 22 ನವೆಂಬರ್ 2014, 19:30 IST

ಬೆಂಗಳೂರು: ಹಿರಿಯ ನಾಗರಿಕರು ತಮ್ಮ ನಿವೃತ್ತಿಯ ನಂತರ ತೊಡಗಿಸಿಕೊಂಡ ಅನೇಕ ಕಾರ್ಯಗಳಿಗೆ ಸುಚೇತಧಾಮ ಮತ್ತು ಸಿಲ್ವರ್‌ ಟಾಕೀಸ್‌ನ ಸಹಯೋಗದಲ್ಲಿ ಫೋರ್ಟಿಸ್‌ ಆಸ್ಪತ್ರೆಯು ಶನಿವಾರ ಮಹಾತ್ಮ ಗಾಂಧಿ ರಸ್ತೆಯ ಕೆಥೆಡ್ರಲ್‌ ಚರ್ಚ್‌ ಆವರಣದಲ್ಲಿ ‘ಆನಂದಂ’ ಕಾರ್ಯಕ್ರಮದ ಮೂಲಕ ವೇದಿಕೆ ಒದಗಿಸಿತ್ತು.

ಹಿರಿಯ ನಾಗರಿಕರೇ ತಾವೇ ತಯಾರಿಸಿದ ಅನೇಕ ಕರಕುಶಲ ವಸ್ತುಗಳು, ಉಲ್ಲನ್‌ ಬಟ್ಟೆಗಳು, ಮಹಿಳೆಯರಿಗೆ ಇಷ್ಟವಾಗುವ ಪರ್ಸ್‌, ಅಲಂಕಾರಿಕ ವಸ್ತುಗಳು, ಪೇಂಟಿಂಗ್‌ಗಳು, ಹತ್ತಿಯ ಸೀರೆಗಳ ಮೇಲೆ ಆಕರ್ಷಕ ಪೇಂಟಿಂಗ್‌, ಉಪ್ಪಿನಕಾಯಿ, ನೈಸರ್ಗಿಕ ತೈಲಗಳು, ಗ್ಲಾಸ್‌ನಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಬೋನ್ಸಾಯ್‌ ಕಲೆಗಳು..... ಹೀಗೆ ಹತ್ತು ಹಲವು ವಸ್ತುಗಳನ್ನು ಪ್ರದರ್ಶಿಸಿ, ಮಾರಾಟ ಮಾಡಿ ಸಂತಸಗೊಂಡರು.

ಇಲ್ಲಿ ಹಿರಿಯ ನಾಗರಿಕರಿಗೆ  ಅನೇಕ ಮಾಹಿತಿಯ ಮಳಿಗೆಗಳೂ ಇದ್ದವು. ಅವರಿಗೆ ಲಭ್ಯವಿರುವ ಸೇವೆಗಳ ಕುರಿತು, ಜೀವನದ ಮುಸ್ಸಂಜೆಯ ಜೀವನವನ್ನು ಉತ್ತಮ­ಗೊಳಿಸಲು ಲಭ್ಯವಿರುವ ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಯಿತು. ಬದುಕಿನ ಮುಸ್ಸಂಜೆಯ ಘಟ್ಟದಲ್ಲಿ ನಡೆಯಲು ಸಹಾಯಕವಾಗುವ ಸಹಾಯಕ ಸಾಧನಗಳು, ಮನೆ ಶುಶ್ರೂಷೆಯ ಕುರಿತು ಸಲಹೆಗಳು, ನಿವೃತ್ತಿ ಆಯ್ಕೆಗಳ ಬಗೆಗೆ ತಿಳಿಸಿಕೊಡುವಂತಹ ಸಲಹಾ ಮಳಿಗೆಗಳು ಇದ್ದವು.

ಫೋರ್ಟಿಸ್‌ ಆರೋಗ್ಯ ಸಂಸ್ಥೆಯ ದಕ್ಷಿಣ ವಿಭಾಗದ ಪ್ರಾದೇಶಿಕ ನಿರ್ದೇಶಕ  ಕಾರ್ತಿಕ್‌ ರಾಜಗೋಪಾಲ್‌ ‘ನಮ್ಮ ಹಿರಿಯರು ಸಹ ವಿಶೇಷ ವ್ಯಕ್ತಿಗಳು, ಅವರಿಗೂ ತಮ್ಮ ಮುಸ್ಸಂಜೆಯ ಕಾಲದಲ್ಲಿ ಸಂತಸ ಅನುಭವಿಸುವ ಹಕ್ಕಿದೆ. ಯುವ ಜನಾಂಗವು ಹಿರಿಯರಿಗೆ ಗೌರವವನ್ನು ಸಲ್ಲಿಸುವ ಮೂಲಕ ಅವರಿಗೆ ಒಂದು ಹರ್ಷದ ಜೀವನವನ್ನು ನೀಡಬೇಕಾಗಿದೆ’ ಎಂದು ಆಶಯ ವ್ಯಕ್ತಪಡಿಸಿದರು.

‘ಆನಂದಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸವಾಗಿದೆ. ಇಲ್ಲಿ ನಂದೇ ಒಂದು ಮಳಿಗೆಗೆ ಅವಕಾಶ ದೊರೆತು ತಯಾರಿಸಿದ ಉಪ್ಪಿನಕಾಯಿ, ಹಪ್ಪಳ ಮಾರಾಟಕ್ಕೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ’ ಎಂದು 65 ವರ್ಷದ ವೀಣಾಜಿ ತಮ್ಮ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.