ADVERTISEMENT

ಮರಗಳ ಸ್ಥಳಾಂತರದ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:40 IST
Last Updated 27 ಮೇ 2018, 19:40 IST
ಸತ್ಯ ಸಾಯಿ ವೈದ್ಯಕೀಯ ಸಂಸ್ಥೆ ಆವರಣದಲ್ಲಿ ಸ್ಥಳಾಂತರಗೊಂಡು ಬೆಳೆದು ನಿಂತಿರುವ ಗಿಡಗಳನ್ನು ಪರಿಸರವಾದಿ ಸುರೇಶ್ ಹೆಬ್ಳೀಕರ್ ಮತ್ತು ವೃಕ್ಷ ವೈದ್ಯ ವಿಜಯ್ ನಿಶಾಂತ್ ವೀಕ್ಷಿಸಿದರು.
ಸತ್ಯ ಸಾಯಿ ವೈದ್ಯಕೀಯ ಸಂಸ್ಥೆ ಆವರಣದಲ್ಲಿ ಸ್ಥಳಾಂತರಗೊಂಡು ಬೆಳೆದು ನಿಂತಿರುವ ಗಿಡಗಳನ್ನು ಪರಿಸರವಾದಿ ಸುರೇಶ್ ಹೆಬ್ಳೀಕರ್ ಮತ್ತು ವೃಕ್ಷ ವೈದ್ಯ ವಿಜಯ್ ನಿಶಾಂತ್ ವೀಕ್ಷಿಸಿದರು.   

ಬೆಂಗಳೂರು: ವೈಟ್‌ಫೀಲ್ಡ್–ಐಟಿಪಿಎಲ್‌ ಬಳಿಯ ಸತ್ಯಸಾಯಿ ಆಸ್ಪತ್ರೆಯಿಂದ ವೈದೇಹಿ ಆಸ್ಪತ್ರೆವರೆಗಿನ ರಸ್ತೆಯ ಬದಿಗಳು ಮತ್ತು ನಡುವೆ ಬೆಳೆದು ನಿಂತಿದ್ದ ವಿವಿಧ ಬಗೆಯ 108 ಮರಗಳು ಮೆಟ್ರೊ ಕಾಮಗಾರಿಯ ಕೊಡಲಿ ಪೆಟ್ಟಿನಿಂದ ತಪ್ಪಿಸಿಕೊಂಡು ಸತ್ಯ ಸಾಯಿ ವೈದ್ಯಕೀಯ ಸಂಸ್ಥೆಯ ಆವರಣಕ್ಕೆ ಸ್ಥಳಾಂತರಗೊಂಡು ಚಿಗುರೊಡೆದು ಬೆಳೆದಿವೆ.

‘ನಮ್ಮ ಮೆಟ್ರೊ’ 2ನೇ ಹಂತದ ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗಿನ ಕಾಮಗಾರಿಗಾಗಿ ಮರಗಳ ಹನನ ಮಾಡಲು ಮುಂದಾಗಿತ್ತು.ಇದಕ್ಕಾಗಿ ಬಿಬಿಎಂಪಿಯಿಂದ ಅನುಮತಿ ಪಡೆದಿತ್ತು.

ಮರಗಳಿಗೆ ಗುರುತು ಹಾಕಿದ್ದನ್ನು ಗಮನಿಸಿದ್ದ ಐಬಿಎಂ ಉದ್ಯೋಗಿ ರಾಮ್ ಮತ್ತು ಸಿದ್ಧಾರ್ಥ ನಾಗ್ ಅವರು ಮರಗಳ ಸ್ಥಳಾಂತರಕ್ಕೆ ಮೆಟ್ರೊ ನಿಗಮದ ಅಧಿಕಾರಿಗಳ ಜತೆಗೆ ಚರ್ಚಿಸಿದರು. ಇದಕ್ಕೆ ಸಹಕಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ADVERTISEMENT

ಇದಕ್ಕೆ ವೃಕ್ಷ ವೈದ್ಯ ವಿಜಯ್ ನಿಶಾಂತ್ ಮತ್ತು ಪರಿಸರಪ್ರೇಮಿ ಅಕ್ಷಯ್ ಹೆಬ್ಳೀಕರ್‌ ನೆರವು ನೀಡಲು ಒಪ್ಪಿದರು.

ಮರಗಳ ಮರು ನಾಟಿ ಮಾಡಲು ಸ್ಥಳಕ್ಕಾಗಿ ಹಲವು ಸಂಸ್ಥೆಗಳಲ್ಲಿ ಮನವಿ ಸಲ್ಲಿಸಲಾಯಿತು. ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಸತ್ಯಸಾಯಿ ವೈದ್ಯಕೀಯ ಸಂಸ್ಥೆಯವರು ಆವರಣದಲ್ಲಿ ಸ್ಥಳಾವಕಾಶ ನೀಡಲು ಒಪ್ಪಿದರು.

2017ರ ಡಿಸೆಂಬರ್ ತಿಂಗಳಲ್ಲಿ ಮರ ಸ್ಥಳಾಂತರದ ಪ್ರಕ್ರಿಯೆ ನಡೆದಿತ್ತು. ವಿಜಯ್ ನಿಶಾಂತ್ ನೇತೃತ್ವದಲ್ಲಿ 115 ಮರಗಳ ಪೈಕಿ 108 ಮರಗಳನ್ನು ಸ್ಥಳಾಂತರ ಮಾಡಲಾಯಿತು.

ನಿಶಾಂತ್ ಅವರು ಮರಗಳಿಗೆ ಸೋಂಕು ತಗಲದಂತೆ ಶಿಲೀಂದ್ರ ನಾಶಕಗಳು, ಇತರೆ ಔಷಧಗಳನ್ನು ಲೇಪಿಸಿ ಆರೈಕೆ ಮಾಡಿದ್ದರು.

ಆಸ್ಪತ್ರೆಯ ಸಿಬ್ಬಂದಿ ದಿನವೂ ನೀರು ಹಾಯಿಸಿ ಮರಗಳ ಪೋಷಣೆ ಮಾಡಿದ್ದರು. ಈಗ ಮರಗಳು ಸೊಂಪಾಗಿ ಬೆಳೆದು ನಿಂತಿದ್ದು, ಪರಿಸರ ಪ್ರೇಮಿಗಳ ಮನ ತಣಿಸಿದವು.

ವೃಕ್ಷಗಳ ಸ್ಥಳಾಂತರ ಸಫಲವಾದ ಹಿನ್ನೆಲೆ ಸತ್ಯ ಸಾಯಿ ವೈದ್ಯಕೀಯ ಸಂಸ್ಥೆಯಲ್ಲಿ ಗ್ರೀನ್ ಸೆಂಚುರಿ ಹೆಸರಿನಡಿ ಶನಿವಾರ ಕಾರ್ಯಕ್ರಮ ನಡೆಸಲಾಗಿತ್ತು. ಸತ್ಯ ಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ.ಡಿ.ಸಿ. ಸುಂದರೇಶ್ ದಾಬಿರ್, ಮೆಟ್ರೊ ಅಧಿಕಾರಿಗಳು ಮತ್ತು ಪರಿಸರವಾದಿ ಸುರೇಶ್ ಹೆಬ್ಲೀಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.