ADVERTISEMENT

ಮಹಿಳೆ ಮೇಲೆ ಕಾಡುಹಂದಿ ದಾಳಿ

ಕನಕಪುರದ ಕೋಡಿಹಳ್ಳಿ ಸಮೀಪದ ಗ್ರಾಮದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:32 IST
Last Updated 26 ಮೇ 2016, 19:32 IST

ಕನಕಪುರ: ಜಮೀನಿನಲ್ಲಿ ರೇಷ್ಮೆ ಸೊಪ್ಪು ಬಿಡಿಸುತ್ತಿದ್ದ ಮಹಿಳೆ ಮೇಲೆ ಕಾಡು ಹಂದಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ  ನಡೆದಿದೆ.

ಹಂದಿದಾಳಿಗೆ ಒಳಗಾದ ಮಹಿಳೆಯನ್ನು ತಾಲ್ಲೂಕಿನ ಹುಣಸನಹಳ್ಳಿ ಪಕ್ಕದ ಪೂಜಾರ್‌ನಾಯ್ಕನದೊಡ್ಡಿ ಗ್ರಾಮದ ರಾಮುನಾಯ್ಕ ಅವರ ಪತ್ನಿ ರೂಪಾ ಬಾಯಿ ಎಂದು ಗುರುತಿಸಲಾಗಿದೆ.

ರೂಪಾ ಬಾಯಿ ಅವರ ಮೇಲೆ ಸುಮಾರು 15 ಕಾಡುಹಂದಿಗಳ ಹಿಂಡು ದಾಳಿ ನಡೆಸಿದೆ. ಈ ವೇಳೆ ಸಲಗ ತನ್ನ ಕೋರೆ ಹಲ್ಲುಗಳಿಂದ ಮನ ಬಂದಂತೆ ತಿವಿದು ಹಲ್ಲೆ ಮಾಡಿದೆ. ಜೋರಾಗಿ ರೂಪಬಾಯಿ ಕಿರುಚಿಕೊಂಡಾಗ ಅಕ್ಕ ಪಕ್ಕದವರು ಸಹಾಯಕ್ಕೆ ಬಂದಿದ್ದರಿಂದ ಕಾಡುಹಂದಿಯಿಂದ ಪರಾಗಿದ್ದಾರೆ.

ತೀವ್ರವಾಗಿ ಗಾಯಗೊಳಿಸಿದ್ದರಿಂದ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರು ಗಾಯಗೊಂಡಿದ್ದ ಜಾಗವನ್ನು ಏಳು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ. ಈ ಸಂಬಂಧ ರಾಮು ನಾಯ್ಕ ಅವರು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳ ದಾಳಿಯಡಿ ಸರ್ಕಾರದಿಂದ ದೊರೆಯುವ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಕ್ಷೇತ್ರದಲ್ಲಿ ಜನ ಸಂಪರ್ಕ ಸಭೆ ನಡೆಸುತ್ತಿರುವ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳಂತೆ ಕಾಡುಹಂದಿಯ ಉಪಟಳ ಜಾಸ್ತಿಯಾಗಿದೆ, ಜಮೀನುಗಳಿಗೆ ಹಿಂಡು ಹಿಂಡಾಗಿ ನುಗ್ಗುವ ಕಾಡುಹಂದಿಗಳು ಬೆಳೆ ನಾಶದ ಜತೆಗೆ ಮನುಷ್ಯರ ಮೇಲೆ ಹಲ್ಲೆ ಮಾಡುತ್ತಿವೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು.

ಆಗ ಸಂಸದ ಸುರೇಶ್‌ ಅವರು ಮಾತನಾಡಿ ಚಾಮರಾಜನಗರದ ಎಂ.ಪಿ. ಧೃವನಾರಾಯಣ್‌ ಮತ್ತು ತಾವು ಕಾಡು ಹಂದಿಗಳನ್ನು ವನ್ಯ ಜೀವಿ ಗುಂಪಿಗೆ ಸೇರಿಸದೆ ಪ್ರತ್ಯೇಕಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ತಿಳಿಸಿ ಒತ್ತಾಯಿಸಿದ್ದೇವೆ,

ಸರ್ಕಾರವು ಕ್ರಮ ಕೈಗೊಳ್ಳುವ ಭರವಸೆಯಿದೆ ರೈತರು ಕಂಗಲಾಗುವುದು ಬೇಡವೆಂದು ತಿಳಿಸಿದ್ದರು. ಅದರ ಬೆನ್ನಲ್ಲೇ ಕಾಡುಹಂದಿಗಳ ದಾಳಿ ನಡೆದಿದೆ.

ಮುಖ್ಯಾಂಶಗಳು
* ಜಮೀನಿನಲ್ಲಿ ರೇಷ್ಮೆ ಸೊಪ್ಪು ಬಿಡುಸುತ್ತಿದ್ದ ವೇಳೆ ಮಹಿಳೆ ಮೇಲೆ ದಾಳಿ
*15 ಹಂದಿಗಳು ಇದ್ದ ಹಿಂಡಿನಿಂದ ದಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT