ADVERTISEMENT

ಮೇ 6 ರಿಂದ ಮೂರು ದಿನ ಸಿರಿಧಾನ್ಯ ಮೇಳ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ಬೆಂಗಳೂರು: ಗ್ರಾಮೀಣ ಕುಟುಂಬ ಸಂಸ್ಥೆ ವತಿಯಿಂದ ‘ಆರೋಗ್ಯವಂತ ಸಮಾಜಕ್ಕಾಗಿ ಸಿರಿಧಾನ್ಯ ಮೇಳ’ವನ್ನು ಮೇ 6 ರಿಂದ 9ರವರೆಗೆ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ.ಎಚ್‌.ಶ್ರೀಧರ್‌ ಮೂರ್ತಿ ಅವರು, ‘ಮಧುಮೇಹ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗಳಿಗೆ ಸಿರಿಧಾನ್ಯದ ಆಹಾರಗಳು ದಿವ್ಯೌಷಧವಾಗಿವೆ. ಸಿರಿಧಾನ್ಯಗಳನ್ನು ಜೀವನಶೈಲಿಯ ಆಹಾರವಾಗಿ ಪರಿವರ್ತನೆ ಆಗಬೇಕು.
ಸಿರಿಧಾನ್ಯಗಳಲ್ಲಿರುವ ಪೌಷ್ಟಿಕಾಂಶಗಳ  ಬಗ್ಗೆ ಜನರಿಗೆ ಮಾಹಿತಿ ನೀಡುವುದು ನಮ್ಮ ಉದ್ದೇಶವಾಗಿದೆ’ ಎಂದರು.

‘ಈ ಮೇಳದಲ್ಲಿ ನವಣೆ, ಸಜ್ಜೆ, ಊದಲು, ಅರ್ಕ, ಸಾಮೆ, ಕೊರ್ಲೆ ಸಿರಿ ಧಾನ್ಯಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಸಿರಿ ಧಾನ್ಯಗಳನ್ನು ಒಂದು ಕೆ.ಜಿ.ಗೆ ₹ 90ನಂತೆ ಮಾರಾಟ ಮಾಡಲಾಗುತ್ತದೆ. ಸಿರಿ ಧಾನ್ಯಗಳನ್ನು ಬೆಳೆಯುವ ರೈತರಿಗೆ  ಬೀಜಗಳನ್ನೂ ಮಾರಾಟ ಮಾಡಲಾಗುವುದು’ ಎಂದು ತಿಳಿಸಿದರು.

‘ಮೇ 8 ರಂದು ಆರೋಗ್ಯ ತಜ್ಞ, ಹೋಮಿಯೋಪಥಿ ವೈದ್ಯ ಡಾ.ಖಾದರ್ ಅವರು ಸಿರಿಧಾನ್ಯಗಳ ಬಳಕೆ, ಉಪಯುಕ್ತತೆ ಕುರಿತು ಉಪನ್ಯಾಸ–ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದು ತಿಳಿಸಿದರು.


‘ಅಭಿನವ ಪ್ರಕಾಶನ ವತಿಯಿಂದ ರಾಜ್ಯದ ಹಲವಾರು ಲೇಖಕರು ಬರೆದ ಆರೋಗ್ಯದ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇದೇ ವೇಳೆ ಬರಗಾಲದ ಸಿರಿವಂತಿಕೆಯ ಸಿರಿಧಾನ್ಯ, ಸಿರಿಧಾನ್ಯದ ಅಡುಗೆ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದರು.

ಮೇಳದಲ್ಲಿ ನಟಿ ಸುಧಾರಾಣಿ, ರಂಗಭೂಮಿ ಕಲಾವಿದ ಅರುಣ್‌ ಸಾಗರ್, ಪತ್ರಕರ್ತ ಜಿ.ಎನ್.ಮೋಹನ್, ಸಾಹಿತಿ ಜಿ.ಎಸ್‌.ಸಿದ್ಧರಾಮಯ್ಯ, ಲೇಖಕಿ  ವಸುಂಧರಾ ಭೂಪತಿ, ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT