ADVERTISEMENT

ರಾಯಧನ, ಕಾಗದದ ಮೇಲಿನ ಜಿಎಸ್‌ಟಿ ರದ್ದುಪಡಿಸಲಿ: ಕವಿ ಡಾ.ಸಿದ್ಧಲಿಂಗಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 9:42 IST
Last Updated 23 ಏಪ್ರಿಲ್ 2018, 9:42 IST
ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತಿ ಪ್ರಕಾಶನದ ಶ್ರೀನಿವಾಸ್ ಮತ್ತು ಐಬಿಎಚ್ ಪ್ರಕಾಶನ ಬೆಂಗಳೂರು ಸಂಜಯ ಅಡಿಗ ಅವರನ್ನು ಕವಿ ಡಾ.ಸಿದ್ಧಲಿಂಗಯ್ಯ ಸನ್ಮಾನಿಸಿದರು. (ಎಡದಿಂದ) ಕರ್ನಾಟಕ ಪ್ರಕಾಶಕರ ಸಂಘ ಅಧ್ಯಕ್ಷರು ಪ್ರಕಾಶ್ ಕಂಬತ್ತಳ್ಳಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ವಸುಂಧರಾ ಭೂಪತಿ, ಸಾಹಿತ್ಯ ಅಕಾಡೆಮಿ ಪ್ರಾದೇಶೀಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ್ ಇದ್ದಾರೆ -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತಿ ಪ್ರಕಾಶನದ ಶ್ರೀನಿವಾಸ್ ಮತ್ತು ಐಬಿಎಚ್ ಪ್ರಕಾಶನ ಬೆಂಗಳೂರು ಸಂಜಯ ಅಡಿಗ ಅವರನ್ನು ಕವಿ ಡಾ.ಸಿದ್ಧಲಿಂಗಯ್ಯ ಸನ್ಮಾನಿಸಿದರು. (ಎಡದಿಂದ) ಕರ್ನಾಟಕ ಪ್ರಕಾಶಕರ ಸಂಘ ಅಧ್ಯಕ್ಷರು ಪ್ರಕಾಶ್ ಕಂಬತ್ತಳ್ಳಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ವಸುಂಧರಾ ಭೂಪತಿ, ಸಾಹಿತ್ಯ ಅಕಾಡೆಮಿ ಪ್ರಾದೇಶೀಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ್ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರಕಾಶಕರು ಲೇಖಕರಿಗೆ ನೀಡುವ ರಾಯಧನ ಹಾಗೂ ಕಾಗದದ ಮೇಲೆ ಶೇ 12ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುತ್ತಿರುವುದನ್ನು ರದ್ದುಪಡಿಸಬೇಕು ಎಂದು ಕವಿ ಡಾ.ಸಿದ್ಧಲಿಂಗಯ್ಯ ಆಗ್ರಹಿಸಿದರು.

ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಪುಸ್ತಕ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಪ್ರಕಾಶಕರು ರಾಯಧನ ನೀಡುವುದೇ ಕಷ್ಟಕರವಾಗಿರುವಾಗ, ಅದರ ಮೇಲೆ ಜಿಎಸ್‌ಟಿ ವಿಧಿಸುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಂಗೀತದ ಪುಸ್ತಕಗಳ ಮೇಲೆ ಹೆಚ್ಚುವರಿಯಾಗಿ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಸಂಗೀತ ಹಾಡಬಾರದು, ಅಳಬೇಕು ಎಂಬ ಉದ್ದೇಶ ಇದರ ಹಿಂದೆ ಇರಬಹುದು. ಈ ತೆರಿಗೆ ಹಾಕಿದವರು ಸಂಗೀತ ವಿರೋಧಿಗಳಾಗಿದ್ದು, ಗೋಳಾಟವನ್ನು ಇಷ್ಟಪಡುವವರಾಗಿರಬಹುದು ಎಂದು ಲೇವಡಿ ಮಾಡಿದರು.

ADVERTISEMENT

ಪತ್ರಿಕೆಗಳಿಗೆ ಸಬ್ಸಿಡಿ ದರದಲ್ಲಿ ಕಾಗದ ಪೂರೈಸಲಾಗುತ್ತಿದೆ. ಅದೇ ರೀತಿ, ಪುಸ್ತಕ ಪ್ರಕಾಶಕರಿಗೂ ಕಾಗದವನ್ನು ಸಬ್ಸಿಡಿ ದರದಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿಯು ಸುಮಾರು ₹300 ಕೋಟಿ ಗ್ರಂಥಾಲಯ ಉಪಕರಣವನ್ನು ಬಾಕಿ ಉಳಿಸಿಕೊಂಡಿದೆ. ಈ ಕರವನ್ನು ಗ್ರಂಥಾಲಯ ಇಲಾಖೆಗೆ ಕೂಡಲೇ ನೀಡಬೇಕು. ಇದರಿಂದ ಈಗ ಖರೀದಿಸುತ್ತಿರುವ 300 ಪುಸ್ತಕಗಳ ಬದಲಿಗೆ 500 ಪುಸ್ತಕಗಳನ್ನು ಕೊಂಡುಕೊಳ್ಳಬಹುದು. ಇದರಿಂದ ಪ್ರಕಾಶಕರು ಹಾಗೂ ಲೇಖಕರಿಗೆ ಅನುಕೂಲವಾಗುತ್ತದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ‘ಪಾಲಿಕೆಯು ಸಂಗ್ರಹಿಸುತ್ತಿರುವ ತೆರಿಗೆಯಲ್ಲಿ ಆರೋಗ್ಯ ಉಪಕರಕ್ಕೆ ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದೆ. ಗ್ರಂಥಾಲಯ ಉಪಕರಕ್ಕೆ ಪ್ರತ್ಯೇಕ ಬ್ಯಾಂಕ್‌ ಖಾತೆಯೇ ಇಲ್ಲ. ಇದರಿಂದ, ಪಾಲಿಕೆಯು ಕೋಟ್ಯಂತರ ರೂಪಾಯಿ ಉಪಕರವನ್ನು ಗ್ರಂಥಾಲಯ ಇಲಾಖೆಗೆ ನೀಡದೇ ಬಾಕಿ ಉಳಿಸಿಕೊಂಡಿದೆ. ಇನ್ನು ಮುಂದಾದರೂ ಪ್ರತ್ಯೇಕ ಖಾತೆಯನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.

ರಾಯಧನ ಹಾಗೂ ಕಾಗದದ ಮೇಲೆ ಶೇ 12ರಷ್ಟು ಜಿಎಸ್‌ಟಿ ಹಾಕಿರುವುದನ್ನು ರದ್ದುಪಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪುಸ್ತಕ ಪ್ರಾಧಿಕಾರದಿಂದ ಪತ್ರ ಬರೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.