ADVERTISEMENT

ವರ್ಷದಲ್ಲಿ ಸ್ವಯಂಚಾಲಿತ ವಿತರಣಾ ವ್ಯವಸ್ಥೆ ಜಾರಿ

ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್‌ ಒದಗಿಸಲು ಉಪಕ್ರಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 19:32 IST
Last Updated 1 ಆಗಸ್ಟ್ 2014, 19:32 IST
ಬೆಸ್ಕಾಂ ಜಾರಿಗೊಳಿಸಲು ಉದ್ದೇಶಿಸಿರುವ ಸ್ವಯಂಚಾಲಿತ ವಿತರಣಾ ವ್ಯವಸ್ಥೆಯ (ಡಿಎಎಸ್‌) ಪೀಣ್ಯ ಕೈಗಾರಿಕಾ ಪ್ರದೇಶದ ಘಟಕದ ಬಗ್ಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮಾಹಿತಿ ಪಡೆದರು. ಮುಖ್ಯ ವ್ಯವಸ್ಥಾಪಕ (ಡಿಎಎಸ್‌) ರವಿ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಚಿತ್ರದಲ್ಲಿದ್ದಾರೆ                       –ಪ್ರಜಾವಾಣಿ ಚಿತ್ರ
ಬೆಸ್ಕಾಂ ಜಾರಿಗೊಳಿಸಲು ಉದ್ದೇಶಿಸಿರುವ ಸ್ವಯಂಚಾಲಿತ ವಿತರಣಾ ವ್ಯವಸ್ಥೆಯ (ಡಿಎಎಸ್‌) ಪೀಣ್ಯ ಕೈಗಾರಿಕಾ ಪ್ರದೇಶದ ಘಟಕದ ಬಗ್ಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮಾಹಿತಿ ಪಡೆದರು. ಮುಖ್ಯ ವ್ಯವಸ್ಥಾಪಕ (ಡಿಎಎಸ್‌) ರವಿ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿದ್ಯುತ್‌ ಬಳಕೆದಾರರಿಗೆ ಗುಣಮಟ್ಟದ ಹಾಗೂ ಅನಿಯಮಿತ ವಿದ್ಯುತ್‌ ಒದಗಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು ಸ್ವಯಂಚಾಲಿತ ವಿತರಣಾ ವ್ಯವಸ್ಥೆ (ಡಿಸ್ಟ್ರಿಬ್ಯೂಷನ್‌ ಅಟೋಮೇಷನ್‌ ಸಿಸ್ಟಮ್‌) ಜಾರಿಗೊ ಳಿಸಲು ಮುಂದಾಗಿದೆ. ಒಂದು ವರ್ಷದಲ್ಲಿ ನಗರದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಡಿಎಎಸ್‌ ವ್ಯವಸ್ಥೆಯ ಘಟಕದ ಪ್ರಗತಿಯನ್ನು ಪರಿಶೀಲಿಸಿದರು.

ಈ ಯೋಜನೆಗೆ ರೂ 563 ಕೋಟಿ ವೆಚ್ಚ ಆಗಲಿದೆ. ಇದಕ್ಕೆ ಜೈಕಾ (ಜಪಾನ್‌ ಇಂಟರ್‌ನ್ಯಾಷನಲ್‌ ಕೊಅಪರೇಷನ್‌ ಏಜೆನ್ಸಿ) ರೂ 417 ಕೋಟಿ ಆರ್ಥಿಕ ಸಹಾಯ ನೀಡಲಿದೆ. ಉಳಿದ ಮೊತ್ತವನ್ನು ಬೆಸ್ಕಾಂ ಭರಿಸಲಿದೆ. 2014–15ನೇ ಆರ್ಥಿಕ ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ನಗರದಲ್ಲಿ ವಿದ್ಯುತ್‌ ವ್ಯತ್ಯಯದ ದೂರುಗಳನ್ನು ಇತ್ಯರ್ಥ ಮಾಡಲು ಈಗ 60–70 ನಿಮಿಷ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಸಾವಿರಾರು ಗ್ರಾಹಕರು ಸಮಸ್ಯೆ ಎದುರಿಸ ಬೇಕಾಗುತ್ತದೆ. ಸಮಸ್ಯೆ ಎಲ್ಲಿ ಉಂಟಾಗಿದೆ ಎಂಬುದು ಪತ್ತೆ ಹಚ್ಚುವುದೇ ಬೆಸ್ಕಾಂ ಸಿಬ್ಬಂದಿಗೆ ದೊಡ್ಡ ಸವಾಲು ಆಗಿದೆ. ಡಿಎಎಸ್‌ ಮೂಲಕ 5–6 ನಿಮಿಷದಲ್ಲೇ ಸಮಸ್ಯೆಯ ಸ್ಥಳ ವನ್ನು ಪತ್ತೆ ಹಚ್ಚಿ ಬೇರೊಂದು ವಿತರಣಾ ಕೇಂದ್ರದ ಮೂಲಕ ಈ ಭಾಗದ ಗ್ರಾಹಕರಿಗೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್ ಪಾಂಡೆ ತಿಳಿಸಿದರು.

‘ಈ ಹಿಂದೆ ವಿದ್ಯುತ್‌ ವ್ಯತ್ಯಯ ಉಂಟಾದಾಗ ಅಂದಾಜು ಸಾವಿರ ಜನರಿಗೆ ಸಮಸ್ಯೆ ಉಂಟಾಗುತ್ತಿತ್ತು. ಡಿಎಎಸ್‌ನಿಂದ ಸಮಸ್ಯೆ ಅನುಭವಿಸುವವರ ಸಂಖ್ಯೆ 100ಕ್ಕೆ ಇಳಿಯಲಿದೆ’ ಎಂದರು. ವ್ಯವಸ್ಥೆಯ ಮೇಲ್ವಿಚಾರಣೆಗೆ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಕೇಂದ್ರ ಕಚೇರಿ ಇರಲಿದೆ. ಈ ಕೇಂದ್ರ ಇಡೀ ನಗರದ ವಿದ್ಯುತ್‌ ಸರಬರಾಜು ವ್ಯವಸ್ಥೆಯ ಬಗ್ಗೆ ನಿಯಂತ್ರಣ ಹೊಂದಿರಲಿದೆ. ಈ ಕೇಂದ್ರದಲ್ಲಿ ಮುಖ್ಯ ನಿಯಂತ್ರಣ ಕೊಠಡಿ (ಎಂಸಿಸಿ) ಹಾಗೂ ಪೂರಕ ನಿಯಂತ್ರಣ ಕೊಠಡಿ (ಬಿಸಿಸಿ) ಎಂಬ ವಿಭಾಗಗಳು ಇರಲಿವೆ. ಈ ಕೇಂದ್ರದ ಮೂಲಕ 11 ಕೆ.ವಿ. ವಿತರಣಾ ಜಾಲದ ಮೇಲ್ವಿಚಾರಣೆ ನಡೆಸಲಾಗುತ್ತದೆ. ಕ್ಷಣಾರ್ಧದಲ್ಲಿ ಸಮಸ್ಯೆಯನ್ನು ಪತ್ತೆ ಹಚ್ಚಿ ಬಗೆಹರಿಸಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯುತ್‌ ಉಳಿತಾಯವನ್ನೂ ಮಾಡಬಹುದು ಎಂದು ಅವರು ವಿವರಿಸಿದರು.

ನಗರದಲ್ಲಿ 1590 ಆರ್‌ಎಂಯು (ರಿಮೋಟ್‌ ಮಾನಿ ಟರಿಂಗ್‌ ಯುನಿಟ್‌) ಘಟಕಗಳನ್ನು ಸ್ಥಾಪಿಸಲಾಗು ತ್ತಿದ್ದು, ಪ್ರತಿ ಘಟಕಕ್ಕೆ ರೂ10 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ 1,000 ಘಟಕಗಳನ್ನು ಸ್ಥಾಪಿಸಲಾಗಿದ್ದು, ವರ್ಷ ದೊಳಗೆ ಉಳಿದ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.