ಬೆಂಗಳೂರು: ‘ಜನರಲ್ಲಿ ವಿಕಿರಣಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅದನ್ನು ಸುರಕ್ಷಿತವಾಗಿ ಹೇಗೆ ಬಳಸಬೇಕು ಎಂಬ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಪರಮಾಣು ಖನಿಜ ಅನ್ವೇಷಣೆ ಹಾಗೂ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಎಲ್.ಕೆ. ನಂದಾ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ವಿಕಿರಣ ಭೌತಶಾಸ್ತ್ರದ ರಾಷ್ಟ್ರೀಯ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಆಹಾರ ಸಂಸ್ಕರಣೆ, ಔಷಧಗಳ ಬಳಕೆಯಲ್ಲಿ ಪ್ರಗತಿ ಸಾಧಿಸಿದ್ದೇವೆ. ಉಪಗ್ರಹ ಉಡಾವಣೆಯಲ್ಲೂ ಬಹಳಷ್ಟು ಸಾಧನೆಗಳು ಆಗಿವೆ. ಆದರೆ, ಉಪಗ್ರಹದ ಜೀವಿತ ಅವಧಿ ಹೆಚ್ಚಿಸುವುದರ ಬಗ್ಗೆ ಚಿಂತಿಸಬೇಕಿದೆ. ವಿಕಿರಣಗಳನ್ನು ಸುರಕ್ಷಿತವಾಗಿ ಬಳಸುವುದರ ಬಗ್ಗೆಯೂ ಗಮನ ನೀಡಬೇಕಿದೆ’ ಎಂದರು.
ವಿಜ್ಞಾನಿ ಎಂ.ಆರ್. ಅಯ್ಯರ್, ‘ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ಪ್ರಾರಂಭವಾದ ವಿಕಿರಣ ಭೌತಶಾಸ್ತ್ರದ ಸಂಶೋಧನಾ ಚಟುವಟಿಕೆಗಳು ವಿಶ್ವವಿದ್ಯಾಲಯಗಳಲ್ಲಿ ಮುಂದುವರಿಯಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರೊ. ಸಿದ್ಧಪ್ಪ, ‘ದಶಕಗಳ ಹಿಂದೆ ವಿದ್ಯಾರ್ಥಿಗಳು ವಿಕಿರಣ ಸಂಶೋಧನೆ ಮಾಡಲು ಹೆಚ್ಚು ಸವಾಲನ್ನು ಎದುರಿಸಿದ್ದರು. ಸಣ್ಣ ಉಪಕರಣಗಳಿಗೂ ದಿನಗಟ್ಟಲೆ ಸುತ್ತಾಡುತ್ತಿದ್ದರು’ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ. ಎಚ್.ಎನ್.ರಮೇಶ್, ‘ಸಮ್ಮೇಳನದಿಂದ ದೇಶದ ಸಂಶೋಧಕರಿಗೆ ಉಪಯೋಗವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.