ADVERTISEMENT

ವಿಚಾರಣೆಗೆ ಹಾಜರಾಗಲು ಶೆಟ್ಟರ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

ಬೆಂಗಳೂರು: ನಿಯಮ ಉಲ್ಲಂಘನೆ ಮಾಡಿ ಭೂಮಿ ಮಂಜೂರು ಮಾಡಿದ ದೂರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಅ. 29ರಂದು ಬೆಳಿಗ್ಗೆ 11.30ಕ್ಕೆ ಖುದ್ದು ಹಾಜರಾಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರಿಗೆ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ನೋಟಿಸ್‌ ನೀಡಿದೆ.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸೂರ್ಯನಾರಾಯಣ ರಾವ್‌ ಅವರ ಪುತ್ರ ಸುಂದರೇಶ್‌ ಅವರಿಗೆ ಶೆಟ್ಟರ್‌ ನಿಯಮಬಾಹಿರವಾಗಿ ಭೂಮಿ ಮಂಜೂರು ಮಾಡಿದ್ದಾರೆ ಎಂದು ಒಕ್ಕಲಿಗರ ಸಂಘದ ಸಂಚಾಲಕ ಎ.ಪ್ರಸಾದ್‌ ದೂರು ದಾಖಲಿಸಿದ್ದರು. ಶೆಟ್ಟರ್‌ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಬಿಎಂಟಿಎಫ್‌ ತನಿಖೆ ಆರಂಭಿಸಿತ್ತು.

ಸೂರ್ಯನಾರಾಯಣ ರಾವ್‌ ಅವರಿಗೆ 1967ರಲ್ಲಿ ನಾಲ್ಕು ಎಕರೆ ಭೂಮಿ­-ಯನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲದ ಕಾರಣ ಭೂಮಿ ಮಂಜೂರು ಮಾಡು-ವುದು ಸಾಧ್ಯವಾಗಿರಲಿಲ್ಲ. ಮಂಜೂರಾದ ಭೂಮಿ ಸಿಗದಿ­ದ್ದ­ರಿಂದ ರಾವ್‌ ಅವರು ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಯುವಾಗಲೇ 1989ರಲ್ಲಿ ಅವರು ನಿಧನ ಹೊಂದಿದರು. ಅವರ ನಿಧನದ ನಂತರ ಸುಂದರೇಶ್‌ ಅವರು ಕಾನೂನು ಸಮರ ಮುಂದುವರಿಸಿದರು.

2010ರಲ್ಲಿ ತೀರ್ಪು ನೀಡಿದ ಹೈಕೋರ್ಟ್‌ ಸುಂದರೇಶ್‌ ಅವರಿಗೆ ಕೃಷಿಭೂಮಿ ನೀಡುವಂತೆ ಆದೇಶಿಸಿತ್ತು. ಆದರೆ, ಕೃಷಿಭೂಮಿಗೆ ಬದಲಾಗಿ ಶೆಟ್ಟರ್‌ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶ್ರೀಗಂಧ ಕಾವಲ್‌ ಪ್ರದೇಶದ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎನ್ನುವುದು ದೂರುದಾರರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.