ADVERTISEMENT

ವಿದ್ಯಾರ್ಥಿ ಪತ್ತೆಗೆ ನೆರವಾದ ‘ವಾಟ್ಸ್‌ಆ್ಯಪ್‌’ 

​ಪ್ರಜಾವಾಣಿ ವಾರ್ತೆ
Published 18 ಮೇ 2017, 20:08 IST
Last Updated 18 ಮೇ 2017, 20:08 IST

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ  ಭಯದಲ್ಲಿ ಮನೆಬಿಟ್ಟು ಹೋಗಿದ್ದ ಯಶವಂತ್‌ ಎಂಬಾತ, ‘ವಾಟ್ಸ್‌ಆ್ಯಪ್‌’ ನೆರವಿನಿಂದ ಪತ್ತೆಯಾಗಿದ್ದಾನೆ.

ಕಾಡುಯರಪ್ಪನಹಳ್ಳಿಯ ‘ಟ್ರಲಿಂಗ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಷಿಯಲ್‌ ಶಾಲೆ’ಯಲ್ಲಿ ಓದುತ್ತಿದ್ದ ಆತ, ಕನಕಪುರ ಮುಖ್ಯ ರಸ್ತೆಯ ನ್ಯಾಯಾಂಗ ಲೇಔಟ್‌ನಲ್ಲಿ ವಾಸವಿದ್ದ.

ಎರಡು ತಿಂಗಳ ಹಿಂದೆ ನಡೆದ ಪರೀಕ್ಷೆಗೆ ಹಾಜರಾಗಿದ್ದ. ‘ಕನ್ನಡ ವಿಷಯದ ಪರೀಕ್ಷೆ ಚೆನ್ನಾಗಿ ಆಗಿಲ್ಲ. ಅನುತ್ತೀರ್ಣನಾಗುತ್ತೇನೆ’ ಎಂದು ಪೋಷಕರಿಗೆ ಹೇಳುತ್ತಿದ್ದ.

ADVERTISEMENT

ಅದೇ ಭಯದಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನಾದಿನ ರಾತ್ರಿಯೇ (ಮೇ 11) ಆತ ಮನೆ ಬಿಟ್ಟು ಹೋಗಿದ್ದ ಎಂದು ತಲಘಟ್ಟಪುರ ಠಾಣೆಯ ಪೊಲೀಸರು ತಿಳಿಸಿದರು.

ವಾಟ್ಸ್‌ಆ್ಯಪ್‌ನಲ್ಲಿ ಭಾವಚಿತ್ರ: ಬಾಗಲೂರು, ಯಲಹಂಕ, ಕಾಡುಯರಪ್ಪನಹಳ್ಳಿ ಹಾಗೂ ಸುತ್ತಮುತ್ತ ಯಶವಂತ್‌ನಿಗಾಗಿ ಹುಡುಕಾಟ ನಡೆಸಿದ್ದ ಪೋಷಕರು, ಆತ ಸಿಗದಿದ್ದರಿಂದ ಮೇ 13ರಂದು ಠಾಣೆಗೆ ದೂರು ಕೊಟ್ಟಿದ್ದರು.

ಜತೆಗೆ ಸಂಬಂಧಿಯೊಬ್ಬರು ಆತನ ಭಾವಚಿತ್ರವನ್ನು ‘ವಾಟ್ಸ್‌ಆ್ಯಪ್‌’ ಮೂಲಕ ಸ್ನೇಹಿತರಿಗೆ ಕಳುಹಿಸಿದ್ದರು. 25,000ಕ್ಕೂ ಹೆಚ್ಚು ಮಂದಿಗೆ ಈ ಸಂದೇಶ ರವಾನೆಯಾಗಿತ್ತು ಎಂದು ಪೊಲೀಸರು ತಿಳಿಸಿದರು.

‘ಬಾಗಲೂರು ಬಸ್‌ ನಿಲ್ದಾಣದ ಬಳಿ ಮೇ 15ರಂದು ರಾತ್ರಿ 11 ಗಂಟೆಗೆ ಯಶವಂತ್‌ ನಿಂತಿದ್ದ. ಆತನನ್ನು ಗಮನಿಸಿದ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಬಂದಿದ್ದ ಭಾವಚಿತ್ರ ತೆರೆದು ನೋಡಿ ಅದರಲ್ಲಿದ್ದ ಪೋಷಕರ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪೋಷಕರು ಸ್ಥಳಕ್ಕೆ ಹೋದಾಗ ಯಶವಂತ್‌ ಪತ್ತೆಯಾದ’ ಎಂದು ವಿವರಿಸಿದರು.

ಕನ್ನಡದಲ್ಲಿ ಅನುತ್ತೀರ್ಣ: ಕನ್ನಡ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಆತ ಉತ್ತೀರ್ಣನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.